ನವದೆಹಲಿ (ಪಿಟಿಐ, ಐಎಎನ್ಎಸ್): ಸರ್ಕಾರಿ ವಾಹನಗಳ ಮೇಲೆ ಕೆಂಪು ದೀಪ, ಸೈರನ್ ಬಳಕೆಗೆ ಸಂಬಂಧಿಸಿದಂತೆ ಈ ಹಿಂದೆ ತಾನು ನೀಡಿದ್ದ ನಿರ್ದೇಶನಗಳು ಪಾಲನೆಯಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಂವಿಧಾನಾತ್ಮಕ ಹುದ್ದೆಗಳಲ್ಲಿ ಇರುವ ಗಣ್ಯರ ವಾಹನಗಳ ಮೇಲೆ ಮಾತ್ರ ಕೆಂಪು ದೀಪ ಬಳಸಬಹುದು. ಪೊಲೀಸ್ ಮತ್ತು ತುರ್ತು ಸೇವೆಗಳ (ಅಗ್ನಿಶಾಮಕ, ಆಂಬುಲೆನ್ಸ್) ವಾಹನಗಳು ನೀಲಿ ದೀಪ ಅಳವಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ವಾಹನಗಳ ಮೇಲಿನ ಕೆಂಪು ದೀಪ ದುರ್ಬಳಕೆಗೆ ಕಡಿವಾಣ ಹಾಕಲು ಕೋರ್ಟ್ ಈ ಹಿಂದೆ ಅನೇಕ ಸಲ ನಿರ್ದೇಶನಗಳನ್ನು ನೀಡಿತ್ತು.
ಈಗ ಮತ್ತೆ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ನೇತೃತ್ವದ ಪೀಠ, ಕೆಂಪು ದೀಪದ ವಾಹನಗಳನ್ನು ಬಳಸಲು ಅರ್ಹರಾದವರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಬೇಕು ಹಾಗೂ ಈ ಕುರಿತ ಕಾನೂನುಗಳಿಗೆ ಮೂರು ತಿಂಗಳ ಒಳಗಾಗಿ ತಿದ್ದುಪಡಿ ತರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.
ಗಣ್ಯರ ಕಾರುಗಳ ಮೇಲೆ ಕೆಂಪು ದೀಪ ಅಳವಡಿಕೆಗೆ ಅವಕಾಶ ಕೊಡುವ ವಿಷಯದಲ್ಲಿ ರಾಜ್ಯ ಸರ್ಕಾರಗಳು ತಮ್ಮ ವಿವೇಚನೆಗೆ ಅನುಗುಣವಾಗಿ ನಡೆದುಕೊಳ್ಳುವಂತಿಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.
ತುರ್ತು ಸಂದರ್ಭಗಳಲ್ಲಿ ಮಾತ್ರ ಪೊಲೀಸರು ತಮ್ಮ ವಾಹನಗಳಲ್ಲಿಯ ಸೈರನ್ ಬಳಸಬಹುದು. ಆದರೆ ಇದು ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಕರ್ಕಶವಾಗಿರಬಾರದು; ಮೋಟಾರು ವಾಹನ ಕಾಯ್ದೆಯನ್ನು ಪೊಲೀಸರು ಯಾವುದೇ ಭಯ ಇಲ್ಲದೆ ಅನುಷ್ಠಾನಕ್ಕೆ ತರಲು ಮುಂದಾಗಬೇಕು ಎಂದು ಪೀಠ ಹೇಳಿದೆ. ಈ ನಿರ್ದೇಶನಗಳನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸಲು ಅವಕಾಶವಿದೆ ಎಂದೂ ಎಚ್ಚರಿಸಿದೆ.
ಕೆಂಪು ದೀಪಗಳ ದುರ್ಬಳಕೆಯಿಂದಾಗಿ ನಗರದ ರಸ್ತೆಗಳಲ್ಲಿ ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೆಂಪು ದೀಪಗಳ ದುರ್ಬಳಕೆಗೆ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ನಿವಾಸಿ ಅಭಯ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.