ಹೈದರಾಬಾದ್ : ಮಿತಿ ಮೀರಿದ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬಂಧನಕ್ಕೆ ಒಳಗಾದ ಕಡಪಾ ಸಂಸದ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ಹೆಚ್ಚಿನ ವಿಚಾರಣೆ ಸಲುವಾಗಿ 14 ದಿನಗಳ ಅವಧಿಗೆ ತನ್ನ ವಶಕ್ಕೆ ನೀಡುವಂತೆ ಸಿಬಿಐ ಸೋಮವಾರ ಮನವಿ ಮಾಡಿದೆ.
ಜಗನ್ ಮೋಹನ್ ರೆಡ್ಡಿ ಅವರನ್ನು ಈದಿನ ಇಲ್ಲಿ ಸಿಬಿಐ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು.
ಜಗನ್ ಮೋಹನ್ ರೆಡ್ಡಿ ತನಿಖೆಯಲ್ಲಿ ಸಹಕರಿಸುತ್ತಿಲ್ಲ. ಬಡವರನ್ನು ವಂಚಿಸಿ ಹಣ ಲೂಟಿ ಮಾಡಿ ಅಕ್ರಮವಾಗಿ ಭಾರಿ ಸಂಪತ್ತು ಶೇಖರಣೆ ಮಾಡಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ಅವರನ್ನು ಇನ್ನಷ್ಟು ತನಿಖೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂಬುದಾಗಿ ಪ್ರತಿಪಾದಿಸಿದ ಸಿಬಿಐ ಪರ ವಕೀಲರು ಇನ್ನೂ 14 ದಿನಗಳ ಅವಧಿಗೆ ಸಿಬಿಐ ವಶಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು.
ಜಗನ್ ಮೋಹನ್ ರೆಡ್ಡಿ ಪರ ವಕೀಲರು ಸಿಬಿಐ ಮನವಿಗೆ ವಿರೋಧ ವ್ಯಕ್ತ ಪಡಿಸಿದರು.
ಜಗನ್ ಮೋಹನ್ ರೆಡ್ಡಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ಕ್ರಿಮಿನಲ್ ಒಳಸಂಚು, ವಂಚನೆ, ಕ್ರಿಮಿನಲ್ ವಿಶ್ವಾಸದ್ರೋಹ, ಲೆಕ್ಕಪತ್ರದಲ್ಲಿ ತಪ್ಪು ಮಾಹಿತಿ, ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 13ನೇ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಜಗನ್ ಅವರ ಆಪ್ತ ವಿಜಯ ಸಾಯಿ ರೆಡ್ಡಿ ಅವರ ಜಾಮೀನು ಮನವಿ ಅರ್ಜಿಯನ್ನು ವಜಾ ಮಾಡಿದರು.
11 ಆರೋಪಿಗಳಿಗೆ ಜಾಮೀನು: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಾಗಿದ್ದ ಇತರೆ 11 ಆರೋಪಿಗಳಿಗೆ ನಾಮಪಲ್ಲಿಯ ಸಿಬಿಐನ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿತು.