ನವದೆಹಲಿ (ಪಿಟಿಐ): ಪ್ರಧಾನ ಮಂತ್ರಿ ಜನಧನ ಯೋಜನೆಯ (ಪಿಎಂಜೆಡಿವೈ) ಲಾಭ ಪಡೆಯಲು ಈಗಾಗಲೇ ಬ್ಯಾಂಕ್ ಖಾತೆ ಹೊಂದಿರುವವರು ಹೊಸದಾಗಿ ಇನ್ನೊಂದು ಬ್ಯಾಂಕ್ ಖಾತೆ ತೆರೆಯುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.
‘ಯಾವುದೇ ಬ್ಯಾಂಕ್ನಲ್ಲಾದರೂ ಈಗಾಗಲೇ ಖಾತೆ ಹೊಂದಿರುವವರು ಜನಧನ ಯೋಜನೆಯಡಿ ಪ್ರತ್ಯೇಕವಾಗಿ ಮತ್ತೊಂದು ಬ್ಯಾಂಕ್ ಖಾತೆ ತೆರೆಯಬೇಕಿಲ್ಲ. ಅಪಘಾತ ವಿಮೆಯ ಲಾಭ ಪಡೆಯಲು ಈಗಿರುವ ಬ್ಯಾಂಕ್ ಖಾತೆಯಲ್ಲೇ ‘ರೂಪೇ ಕಾರ್ಡ್’ ಹೊಂದಬಹುದು’ ಎಂದು ಹಣಕಾಸು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘ಈಗಿರುವ ಬ್ಯಾಂಕ್ ಖಾತೆಯಲ್ಲೇ ಓವರ್ ಡ್ರಾಫ್ಟ್ ಸೌಲಭ್ಯವನ್ನು ವಿಸ್ತರಿಸಬಹುದು. 18ರಿಂದ 70 ವರ್ಷದೊಳಗಿನ ಎಲ್ಲ ರೂಪೇ ಕಾರ್ಡ್ದಾರರಿಗೂ ₨1 ಲಕ್ಷ ಅಪಘಾತ ವಿಮೆ ಸಿಗುತ್ತದೆ. ಇದರ ಲಾಭ ಪಡೆಯಲು ಈ ಕಾರ್ಡ್ ಪಡೆದ 45 ದಿನಗಳಲ್ಲಿ ಅದನ್ನು ಬಳಸುವುದು ಅವಶ್ಯ’ ಎಂದು ಅದು ಹೇಳಿದೆ.
ಅಪಘಾತ ಸಂಭವಿಸಿದ 30 ದಿನಗಳ ಒಳಗಾಗಿ ಬ್ಯಾಂಕ್ಗೆ ವಿಮೆಗಾಗಿ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ನೀಡಬೇಕು ಎಂದೂ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕುಟುಂಬವೊಂದರಲ್ಲಿ ಹಲವು ಖಾತೆಗಳನ್ನು/ಕಾರ್ಡ್ಗಳನ್ನು ಹೊಂದಿದ್ದರೂ, ಒಂದು ಕಾರ್ಡ್ನ ಮೇಲೆ ಒಬ್ಬ ವ್ಯಕ್ತಿಗೆ ಮಾತ್ರ ₨30 ಸಾವಿರ ಜೀವ ವಿಮಾ ಸೌಲಭ್ಯ ಸಿಗಲಿದೆ. ಈ ಮೊತ್ತವನ್ನು ಪಡೆಯಲು ಸಂಬಂಧಿಸಿದ ಬ್ಯಾಂಕ್ನ ನೋಡಲ್ ಶಾಖೆಗೆ ಖಾತೆದಾರರ ನಾಮನಿರ್ದೇಶಿತ ವ್ಯಕ್ತಿಯು ಎಲ್ಲ ಅಗತ್ಯ ದಾಖಲುಪತ್ರಗಳನ್ನು ಸಲ್ಲಿಸುವುದು ಅವಶ್ಯಕ ಎಂದು ಸಚಿವಾಲಯ
ಹೇಳಿದೆ.
ಸರ್ಕಾರಿ ನೌಕರರು (ಸೇವೆಯಲ್ಲಿರುವವರು ಅಥವಾ ನಿವೃತ್ತರು) ಮತ್ತು ಅವರ ಕುಟುಂಬಗಳು, ಆದಾಯ ತೆರಿಗೆ ಪಾವತಿದಾರರು ಅಥವಾ ಟಿಡಿಎಸ್ ಕಡಿತದಾರರು, ಆಮ್ ಆದಮಿ ಬಿಮಾ ಯೋಜನೆ ವ್ಯಾಪ್ತಿಗೆ ಒಳಪಡುವವರು ಜನಧನ ಯೋಜನೆಯಡಿ ಜೀವವಿಮಾ ಸೌಲಭ್ಯ ಪಡೆಯಲು ಅನರ್ಹರಾಗಿದ್ದಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಈವರೆಗೂ ಬ್ಯಾಂಕ್ಗಳು ಜನಧನ ಯೋಜನೆಯಡಿ ₨8.76 ಕೋಟಿ ಖಾತೆಗಳನ್ನು ತೆರೆದಿವೆ ಮತ್ತು 5.78 ಕೋಟಿ ರೂಪೇ ಡೆಬಿಟ್ ಕಾರ್ಡ್ಗಳನ್ನು ವಿತರಿಸಿವೆ ಎಂದು ಸಚಿವಾಲಯ ತಿಳಿಸಿದೆ.