ಹೈದರಾಬಾದ್ (ಪಿಟಿಐ): ಜಾಮೀನು ಪಡೆಯಲು ಲಂಚ ನೀಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಇಲ್ಲಿನ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಆದರೆ ತಮ್ಮ ಓಬಳಾಪುರಂ ಗಣಿ ಕಂಪೆನಿ ಭಾಗಿಯಾದ ಆರೋಪವಿರುವ ಅಕ್ರಮ ಗಣಿಗಾರಿಕೆ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಇರುವುದರಿಂದ, ಪ್ರಸ್ತುತ ಬೆಂಗಳೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರೆಡ್ಡಿ ಸೆರೆವಾಸ ಇನ್ನೂ ಮುಂದುವರಿಯಲಿದೆ.
ಜಾಮೀನಿಗಾಗಿ ಲಂಚ ಪಡೆದ ಆರೋಪದಲ್ಲಿ ಅಮಾನತುಗೊಂಡ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಟಿ. ಪಟ್ಟಾಭಿರಾಮ ರಾವ್ ಅವರಿಗೆ ಲಂಚ ನೀಡಿದ ಪ್ರಕರಣದಲ್ಲಿ ರೆಡ್ಡಿ ವಿರುದ್ಧ ಭ್ರಷ್ಟಾಚಾರ ವಿರೋಧಿ ದಳವು (ಎಸಿಬಿ) ಮೊಕದ್ದಮೆ ದಾಖಲಿಸಿತ್ತು.
ರಾವ್ ಅವರಿಗೆ ಲಂಚ ನೀಡಲು ಯತ್ನಿಸಿದ ಇನ್ನೊಂದು ಪ್ರಕರಣದಲ್ಲೂ ರೆಡ್ಡಿ ವಿರುದ್ಧ ಎರಡನೇ ಮೊಕದ್ದಮೆ ದಾಖಲಾಗಿದ್ದು, ಇದಕ್ಕೆ 2012ರ ಅಕ್ಟೋಬರ್ನಲ್ಲೇ ಹೈಕೋರ್ಟ್ ಜಾಮೀನು ನೀಡಿರುವುದನ್ನು ಸ್ಮರಿಸಬಹುದು.
ಎಸಿಬಿ ನ್ಯಾಯಾಲಯವು ಎರಡನೇ ಪ್ರಕರಣದಲ್ಲಿ ರೆಡ್ಡಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ ಕಳೆದ ತಿಂಗಳು ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಸಿಬಿಐ ವಿಶೇಷ ನ್ಯಾಯಾಧೀಶರಾಗಿ ರಾವ್ ಅವರು ಓಎಂಸಿ ಪ್ರಕರಣದಲ್ಲಿ ರೆಡ್ಡಿಯವರಿಗೆ ಮಾತ್ರ ಜಾಮೀನು ನೀಡಿ, ಅದೇ ಪ್ರಕರಣದ ಸಹಆರೋಪಿಯಾಗಿದ್ದ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರಿಗೆ ಜಾಮೀನು ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ಸಿಬಿಐಯು ತನಿಖೆಯನ್ನು ಆರಂಭಿಸಿ, ಲಂಚ ಪ್ರಕರಣವನ್ನು ಬಯಲಿಗೆಳೆದಿತ್ತು.
ಇದಾದ ನಂತರ ಹೈಕೋರ್ಟ್, ರಾವ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಅವರು ರೆಡ್ಡಿ ಅವರಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ನಂತರ ಎಸಿಬಿಯು ಪ್ರಕರಣದಲ್ಲಿ ರಾವ್ ಸೇರಿದಂತೆ ಸೇವೆಯಲ್ಲಿದ್ದ ಮೂವರು ನ್ಯಾಯಾಧೀಶರು ಮತ್ತು ಇತರ ಎಂಟು ಆರೋಪಿಗಳನ್ನು ಬಂಧಿಸಿತ್ತು. ಈಗ ರೆಡ್ಡಿ ಹೊರತುಪಡಿಸಿ ಉಳಿದೆಲ್ಲ ಆರೋಪಿಗಳು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.