ಹೈದರಾಬಾದ್: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಂದ್ಯಾಲದಿಂದ ಆಯ್ಕೆಯಾದ ಸಂಸದ ಎಸ್.ಪಿ.ವೈ. ರೆಡ್ಡಿ ಭಾನುವಾರ ಟಿಡಿಪಿ ಸೇರಿದ್ದಾರೆ. ರೆಡ್ಡಿ ಅವರ ಜತೆಯಲ್ಲಿ ಕರ್ನೂಲು ಸಂಸದೆ ಬುಟ್ಟಾ ರೇಣುಕಾ ಅವರ ಪತಿ ನೀಲಕಂಠಮ್ ಸಹ ಟಿಡಿಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ರೇಣುಕಾ ಅವರು ಟಿಡಿಪಿ ಸೇರುವುದು ಬಹುತೇಕ ಖಚಿತವಾಗಿದೆ.
‘ಆಂಧ್ರಪ್ರದೇಶದಲ್ಲಿ ಟಿಡಿಪಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿವೆ. ನನ್ನ ಕ್ಷೇತ್ರಕ್ಕೆ ಉತ್ತಮ ಸೇವೆ ಮಾಡುವ ಉದ್ದೇಶದಿಂದ ನಾನು ಟಿಡಿಪಿ ಸೇರಿದ್ದೇನೆ’ ಎಂದು ರೆಡ್ಡಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಟಿಡಿಪಿ ಸೇರುವ ಇಚ್ಛೆ ವ್ಯಕ್ತಪಡಿಸಿದ ರೆಡ್ಡಿ, ‘ನನ್ನ ಈ ನಿರ್ಧಾರವನ್ನು ವೈಎಸ್ಆರ್ ಕಾಂಗ್ರೆಸ್ ನಾಯಕರಿಗೆ ತಿಳಿಸಿಲ್ಲ’ ಎಂದು ಹೇಳಿದ್ದಾರೆ.
ರಾಯಲಸೀಮೆಯ ಕಾಂಗ್ರೆಸ್ ನಾಯಕ ಟಿ.ಜಿ. ವೆಂಕಟೇಶ ಕಾಂಗ್ರೆಸ್ನಿಂದ ಟಿಡಿಪಿಗೆ ಹಾರಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಚಿತ್ರವೆಂದರೆ, ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲು ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ನೇತೃತ್ವದಲ್ಲಿ ನವದೆಹಲಿಗೆ ತೆರಳಿದ್ದ ಸಂಸದರ ನಿಯೋಗದಲ್ಲಿ ಎಸ್.ಪಿ.ವೈ. ರೆಡ್ಡಿ ಕೂಡ ಇದ್ದರು.