ನವದೆಹಲಿ (ಐಎಎನ್ಎಸ್): ಮಧ್ಯವರ್ತಿಗಳಿಂದಾಗಿ ತತ್ಕಾಲ್ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ದುರ್ಬಳಕೆ ಆಗುತ್ತಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ರೈಲ್ವೆ ಸಚಿವಾಲಯ, ಬೆಳಿಗ್ಗೆ 8ರಿಂದ 9ಗಂಟೆ ವರೆಗೆ ಒಬ್ಬರಿಗೆ ಎರಡು ಟಿಕೆಟ್ ಎಂಬ ನಿರ್ಬಂಧ ವಿಧಿಸಿದೆ.
ಹಾಗೆಯೇ `ಆ ಕ್ಷಣದ ಮುಂಗಡ ಕಾಯ್ದಿರಿಸುವಿಕೆ ಅವಕಾಶ~ (ಕ್ವಿಕ್ ಬುಕ್ ಆಪ್ಷನ್) ಮತ್ತು `ಕ್ಯಾಷ್ ಕಾರ್ಡ್ ಬುಕಿಂಗ್~ ಸೇವೆಯನ್ನು ಬೆಳಿಗ್ಗೆ 8ರಿಂದ 9 ಗಂಟೆಯ ಅವಧಿಯಲ್ಲಿ ರದ್ದುಗೊಳಿಸಲು ತೀರ್ಮಾನಿಸಿದೆ. ಈಗಾಗಲೇ ಈ ಅವಧಿಯಲ್ಲಿ ಮಧ್ಯವರ್ತಿಗಳು ಮುಂಗಡ ಟಿಕೆಟ್ ಕಾಯ್ದಿರಿಸುವುದನ್ನು ರೈಲ್ವೆ ಸಚಿವಾಲಯ ನಿರ್ಬಂಧಿಸಿದೆ.
ಟಿಕೆಟ್ ವಿತರಣಾ ಕೇಂದ್ರಗಳು ಬೆಳಿಗ್ಗೆ ತೆರೆಯುತ್ತಿದ್ದಂತೆಯೇ ಮಧ್ಯವರ್ತಿಗಳು ಸಾರಾಸಗಟಾಗಿ ತತ್ಕಾಲ್ ಟಿಕೆಟ್ಗಳನ್ನು ಮುಂಗಡ ಕಾಯ್ದಿರಿಸುತ್ತಾರೆ. ಇದರಿಂದ ಸಾಮಾನ್ಯ ಪ್ರಯಾಣಿಕರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.