ನವದೆಹಲಿ: ಅಧಿಕೃತ ಸರ್ಕಾರಿ ಬಂಗಲೆ ಖಾಲಿ ಮಾಡುವ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ನನಗೆ ಮತ್ತು ನನ್ನ ತಂದೆಗೆ ತಂಗಲು ಲಖನೌದಲ್ಲಿ ಒಂದು ಸೂರು ಕಲ್ಪಿಸಿಕೊಡಿ ಎಂದು ಮಾಧ್ಯಮದವರಿಗೆ ಸವಾಲು ಹಾಕಿದ್ದಾರೆ.
ಸೋಮವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್, ನೀವು ವಿಚಾರದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಿರೀ ಎಂದೆನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಹಾಗೂ ಅಖಿಲೇಶ್ ಯಾದವ್ ತಾವು ವಾಸಿಸುತ್ತಿರುವ ಅಧಿಕೃತ ಸರ್ಕಾರಿ ನಿವಾಸ ಖಾಲಿ ಮಾಡಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕೆಂದು ಕೋರಿ ಸೋಮವಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನಾವು ಸರ್ಕಾರಿ ಬಂಗಲೆ ಬಿಟ್ಟು ಹೊರಬರಲು ಸಿದ್ಧರಿದ್ದೇವೆ. ಆದರೆ ನಮಗೆ ಹೆಚ್ಚಿನ ಕಾಲಾವಕಾಶ ಬೇಕು. ನನಗೆ ಮತ್ತು ನನ್ನ ತಂದೆ ಮುಲಾಯಮ್ ಸಿಂಗ್ ಉಳಿದುಕೊಳ್ಳಲು ಲಖನೌದಲ್ಲಿ ಯಾವುದೇ ಮನೆಯಿಲ್ಲ. ನೀವು ನಮಗಾಗಿ ಸ್ಥಳ ಹುಡುಕಿಕೊಡುವುದಾದರೆ ಸರ್ಕಾರಿ ಬಂಗಲೆ ಬಿಡುವ ಯೋಚನೆ ಮಾಡಬಹುದು ಎಂದು ಕೆಂಡಮಂಡಲರಾದರು.