ಜಮ್ಮು (ಪಿಟಿಐ): ಇಲ್ಲಿನ ಫೂಂಚ್ ಜಿಲ್ಲೆಯ ಮೆಂದಾರ್ ಉಪ ವಿಭಾಗದಲ್ಲಿರುವ ಭಾರತ--– ಪಾಕಿಸ್ತಾನ ಗಡಿನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳು ಭಾನುವಾರ ಬೆಳಿಗ್ಗೆ ಕದನ ವಿರಾಮ ಉಲ್ಲಂಘಿಸಿವೆ.
‘ಸಣ್ಣ ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರತದ ಐದು ಕಾವಲು ಚೌಕಿಗಳ ಮೇಲೆ ಪಾಕ್ ಪಡೆಗಳು ಸತತ ಮೂರು ಗಂಟೆ ಕಾಲ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭಾರತ ಕೂಡ ಪ್ರತ್ಯುತ್ತರ ನೀಡಿದೆ’ ಎಂದು ರಕ್ಷಣಾ ವಕ್ತಾರ ಎಸ್.ಎನ್. ಆಚಾರ್ಯ ತಿಳಿಸಿದ್ದಾರೆ. ‘ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದು ಅವರು ಖಚಿತಪಡಿಸಿದ್ದಾರೆ.