ನವದೆಹಲಿ (ಪಿಟಿಐ): ಪಟಿಯಾಲ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಶುಕ್ರವಾರವೂ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಆದೇಶ ನೀಡಿದಲ್ಲಿ ಮೇಲಿನ ನ್ಯಾಯಾಲಯದ ಮೊರೆ ಹೋಗುವುದಾಗಿ ಎಎಪಿ ಗುರುವಾರ ತಿಳಿಸಿದೆ.
ಬಿಜೆಪಿ ಮುಖಂಡ ನಿತಿನ್ ಗಡ್ಕರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ವೈಯಕ್ತಿಕ ಬಾಂಡ್್ ಸಲ್ಲಿಸುವ ಸಾಧ್ಯತೆಯನ್ನು ಪಕ್ಷ ಅಲ್ಲಗಳೆದಿದೆ.
‘ಕೋರ್ಟ್್ ಕಲಾಪದ ವೇಳೆ ಹಾಜರಿರುವುದಾಗಿ ಮುಚ್ಚಳಿಕೆ ಬರೆದುಕೊಡಲು ಸಿದ್ಧವಿರುವಾಗ ಬಾಂಡ್ ಕೊಡುವ ಅಗತ್ಯವಿಲ್ಲ ಎಂದು ಕೋರ್ಟ್ಗೆ ತಿಳಿಸಿದ್ದೇವೆ. ಶುಕ್ರವಾರವೂ ಕೋರ್ಟ್ ಮುಂದೆ ಈ ವಿಚಾರ ಇಡುತ್ತೇವೆ. ಜಾಮೀನು ಬಾಂಡ್ ನೀಡದೇ ಇರುವ ಕಾರಣಕ್ಕೆ ಬಡವರು ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ’ ಎಂದು ಪಕ್ಷದ ಮುಖಂಡ, ವಕೀಲ ಪ್ರಶಾಂತ್ ಭೂಷಣ್ ತಿಳಿಸಿದರು.
‘ಬಾಂಡ್ ಕೊಡುವುದು ನಮ್ಮ ಸಿದ್ಧಾಂತಕ್ಕೆ ವಿರುದ್ಧವಾದುದು. ಒಂದು ವೇಳೆ ಕೋರ್ಟ್ ಆದೇಶ ನಮ್ಮ ಪರವಾಗಿ ಇಲ್ಲದಿದ್ದರೆ ನಾವು ಅದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ’ ಎಂದು ಪಕ್ಷದ ಮುಖಂಡ ಸಂಜಯ್ ಸಿಂಗ್ ಹೇಳಿದರು.
‘ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 88ರ ಪ್ರಕಾರ, ಸಮನ್ಸ್ ಅಥವಾ ಬಂಧನ ವಾರಂಟ್್ ಹೊರಡಿಸುವ ಅಧಿಕಾರ ಇರುವ ನ್ಯಾಯಾಧೀಶರ ಮುಂದೆ ಆರೋಪಿ ಹಾಜರಿದ್ದ ಪಕ್ಷದಲ್ಲಿ, ಆ ನ್ಯಾಯಾಧೀಶರು ಭದ್ರತಾ ಠೇವಣಿ ಇಲ್ಲದೆಯೂ ಬಾಂಡ್್ ನೀಡುವಂತೆ ಆತನನ್ನು ಕೇಳಬಹುದು. ಆದ್ದರಿಂದ ಜಾಮೀನು ಬಾಂಡ್ ಕೇಳುವ ಅಗತ್ಯ ಇಲ್ಲ. ಬಾಂಡ್ ಕೇಳದೇ ಜಾಮೀನು ಕೊಟ್ಟ ನಾಲ್ಕು ಉದಾಹರಣೆಗಳಿವೆ’ ಎಂದು ಹಿರಿಯ ವಕೀಲ ಶಾಂತಿ ಭೂಷಣ್ ಹೇಳಿದರು.
ಮನೆ ಮನೆ ಸಂಪರ್ಕ ಕಾರ್ಯಕ್ರಮ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕೇಜ್ರಿವಾಲ್್ ಅವರು ಯಾವ ಕಾರಣಕ್ಕೆ ಬಂಧನಕ್ಕೊಳಗಾದರು ಎನ್ನುವುದನ್ನು ಜನರಿಗೆ ತಿಳಿಸಲು ಮನೆ ಮನೆ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಎಎಪಿ ತಿಳಿಸಿದೆ. ಪ್ರತಿಭಟನೆ ಬದಲು ಈ ಕಾರ್ಯಕ್ರಮ ನಡೆಸಲು ಪಕ್ಷ ಮುಂದಾಗಿದೆ. ತಿಹಾರ್ ಜೈಲಿನಲ್ಲಿರುವ ಕೇಜ್ರಿವಾಲ್್ ಅವರೊಂದಿಗೆ ಎಎಪಿ ಮುಖಂಡರು ಗುರುವಾರ ಬೆಳಿಗ್ಗೆ ಸಭೆ ನಡೆಸಿ ಈ ತೀರ್ಮಾನ ತೆಗೆದುಕೊಂಡರು.
ಬಂಧಿತ ಮುಖಂಡರ ಬಿಡುಗಡೆ: ತಿಹಾರ್ ಜೈಲಿನ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಬಂಧಿತರಾಗಿದ್ದ 59 ಕಾರ್ಯಕರ್ತರು ಹಾಗೂ ಕೆಲ ನಾಯಕರನ್ನು ವೈಯಕ್ತಿಕ ಬಾಂಡ್್ ಮೇಲೆ ಗುರುವಾರ ಬಿಡುಗಡೆ ಮಾಡಲಾಯಿತು.
ಪಿತೃ ವಿಯೋಗ: ಸಿಸೋಡಿಯಾ ಅವರ ತಂದೆ ಗುರುವಾರ ಮೃತಪಟ್ಟರು. ಸುದ್ದಿ ತಿಳಿದ ಕೂಡಲೇ ಅವರಿಗೆ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಕೊಡಲಾಯಿತು.
ಯೋಗೇಂದ್ರ ಯಾದವ್ ಅವರು ಸಹ ವೈಯಕ್ತಿಕ ಬಾಂಡ್ ನೀಡಲು ಮೊದಲು ನಿರಾಕರಿಸಿದ್ದರು. ನಂತರ ಅವರನ್ನು ತೀಸ್ ಹಜಾರಿ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ₨ 5,000 ವೈಯಕ್ತಿಕ ಬಾಂಡ್ ನೀಡುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಏಕ್ತಾ ಗೌಬಾ ಅವರು ಸೂಚಿಸಿದರು. ಕೋರ್ಟ್ ಆದೇಶ ಒಪ್ಪಿಕೊಂಡ ಮೇಲೆ ಯಾದವ್ ಅವರನ್ನು ಬಿಡುಗಡೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.