ಮುಂಬೈ (ಪಿಟಿಐ): ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ವಿಷಯವಾಗಿ ಬಿಜೆಪಿ ಹಾಗೂ ಶಿವಸೇನಾ ನಡುವೆ ಸಂಘರ್ಷ ಶುರುವಾಗಿದೆ.
ಈ ಬಾರಿ ೧೩೫ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಮುಂದಿಟ್ಟ ಬೇಡಿಕೆಯನ್ನು ಶಿವಸೇನಾ ಅಧ್ಯಕ್ಷ ಉದ್ಧವ್್ ಠಾಕ್ರೆ ಸೋಮವಾರ ತಳ್ಳಿಹಾಕಿದ್ದಾರೆ.ಎಲ್ಲದಕ್ಕೂ ಪರ್ಯಾಯ ಇದೆ ಎಂದಿರುವ ಅವರು ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವ ಸೂಚನೆಯನ್ನೂ ನೀಡಿದ್ದಾರೆ. ಸ್ಥಾನ ಹೊಂದಾಣಿಕೆ ಸೂತ್ರ ನಿರ್ಧರಿಸುವುದಕ್ಕೆ ಸಮಾಲೋಚನೆ ನಡೆಯುತ್ತಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
‘ಬಿಜೆಪಿ–ಸೇನಾ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ನಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗುವರು’ ಎಂದು ಉದ್ಧವ್್ ಈ ಮೊದಲು ಹೇಳಿದ್ದರು. ಆರ್ಪಿಐ (ಅಠಾವಳೆ) ಹಾಗೂ ಸ್ವಾಭಿಮಾನಿ ಶೇತ್ಕರಿ ಸಂಘಟನೆ, ರಾಜು ಶೆಟ್ಟಿ ಬಣದಂಥ ಸಣ್ಣ ಮಿತ್ರಪಕ್ಷಗಳಿಗೆ ಸ್ಥಾನ ಹಂಚಿಕೆ ಬಳಿಕ ಬಿಜೆಪಿ ಹಾಗೂ ಸೇನಾ ತಲಾ ೧೩೫ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ರಾಜೀವ್ ಪ್ರತಾಪ್ ರೂಡಿ ಭಾನುವಾರ ಹೇಳಿದ್ದರು.
೨೦೦೯ರಲ್ಲಿ ಶಿವಸೇನಾ ೧೬೯ ಹಾಗೂ ಬಿಜೆಪಿ ೧೧೯ ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ‘ಸ್ಥಾನ ಹೊಂದಾಣಿಕೆ ಮಾತುಕತೆ ಮುಂದುವರಿಸಬಾರದು. ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದೆ ಎಂದು ಬಿಜೆಪಿ ವಕ್ತಾರ ಮಾಧವ್ ಭಂಡಾರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಬೇಕಾಗಿರುವುದು ಏನೂ ಇಲ್ಲ. ಮಾತುಕತೆಯಲ್ಲಿ ಭಾಗಿಯಾಗಿಲ್ಲದವರು ಈ ಬಗ್ಗೆ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ’ ಎಂದು ಉದ್ಧವ್ ಹೇಳಿದ್ದಾರೆ.
ಮೊದಲೇ ನಿರ್ಧಾರವಾಗಿತ್ತು
ಎರಡು ಪಕ್ಷಗಳ ನಡುವಣ ಮೈತ್ರಿ ೨೫ ವರ್ಷಗಳಷ್ಟು ಹಳೆಯದು. ನಾವು ಕಾಂಗ್ರೆಸ್–ಎನ್ಸಿಪಿ ಸರ್ಕಾರ ಉರುಳಿಸಿ ಮರಾಠಿಗರನ್ನು ಉಳಿಸಬೇಕು. ಎಲ್ಲ ಹಿಂದುತ್ವ ಶಕ್ತಿಗಳು ಒಟ್ಟಾಗಬೇಕು ಎನ್ನುವುದು ನಮ್ಮ ಹಂಬಲ. ಈ ಚುನಾವಣೆಯಲ್ಲಿ ಶಿವಸೇನಾ ೧೭೧ ಹಾಗೂ ಬಿಜೆಪಿ ೧೧೭ ಸ್ಥಾನಗಳಲ್ಲಿ ಸ್ಪರ್ಧಿಸುವುದು ಈ ಮೊದಲೇ ನಿರ್ಧಾರವಾಗಿತ್ತು ಎನ್ನುವುದನ್ನು ಬಿಜೆಪಿ ಮರೆಯಬಾರದು
– ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ