ಶಿಮ್ಲಾ: ಹಿಮಾಚಲ ಪ್ರದೇಶದ ಥಾಲೋಟ್ ಸಮೀಪ ಬಿಯಾಸ್ ನದಿಯಲ್ಲಿ ಹೈದರಾಬಾದ್ನ ವಿಎನ್ಆರ್ ವಿಜ್ಞಾನ ಜ್ಯೋತಿ ಎಂಜಿನಿಯರಿಂಗ್ ಕಾಲೇಜಿನ 24 ವಿದ್ಯಾರ್ಥಿಗಳು ಕೊಚ್ಚಿ ಹೋದ ಪ್ರಕರಣವು ಲರ್ಜಿ ಜಲ ವಿದ್ಯುತ್ ಯೋಜನೆ ಅಧಿಕಾರಿಗಳ ‘ನಿರ್ಲಕ್ಷ್ಯದ ಪರಮಾವಧಿ’ ಎಂದು ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ.
ಈ ನಡುವೆ ವಿದ್ಯಾರ್ಥಿಗಳ ಪೋಷಕರಲ್ಲಿ ಕೆಲವರು ಈಗಾಗಲೇ ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ತಮ್ಮ ಮಕ್ಕಳು ಬದುಕಿ ಬರುತ್ತಾರೆ ಎಂಬ ಆಸೆಯಿಂದ ಕಾಯುತ್ತಿದ್ದಾರೆ.
ಸುದ್ದಿ ತಿಳಿದ ಕೂಡಲೇ ಕೆಲವರು ಚಂಡೀಗಡಕ್ಕೆ ಪ್ರಯಾಣ ಬೆಳೆಸಿದರು. ಮತ್ತೆ ಕೆಲವರು ಹೈದರಾಬಾದ್ ಕಾಲೇಜು ಕ್ಯಾಂಪಸ್ಗೆ ತೆರಳಿ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸಿದರು. ಆದರೆ ಅಲ್ಲಿ ಭದ್ರತಾ ಸಿಬ್ಬಂದಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಆತನ ಬಳಿ ಯಾವುದೇ ಮಾಹಿತಿ ಇರಲಿಲ್ಲ. ಮೊದಲೇ ಸಂಕಟದಲ್ಲಿದ್ದ ಪೋಷಕರು ರೊಚ್ಚಿಗೆದ್ದರು.
ಹಿಮಾಚಲಪ್ರದೇಶಕ್ಕೆ ವಿಶೇಷ ವಿಮಾನದಲ್ಲಿ ಕರೆದೊಯ್ಯುವುದಾಗಿ ಕಾಲೇಜು ಆಡಳಿತ ಮಂಡಳಿ ಹಾಗೂ ತೆಲಂಗಾಣ ಸರ್ಕಾರ ಪೋಷಕರಿಗೆ ಭರವಸೆ ನೀಡಿದೆ. ‘ಶಂಷಾಬಾದ್್ ವಿಮಾನ ನಿಲ್ದಾಣದಲ್ಲಿ ಕಾದಿದ್ದೇ ಬಂತು. ಕಾಲೇಜು, ಸರ್ಕಾರದ ಕಡೆಯಿಂದ ಒಬ್ಬರ ಸುಳಿವೂ ಇರಲಿಲ್ಲ’ ಎಂದು ವಿದ್ಯಾರ್ಥಿಯೊಬ್ಬನ ತಂದೆ ಎನ್.ಮಲ್ಲೇಶ್್ ಆಕ್ರೋಶದಿಂದ ನುಡಿದರು.
ಸಿಟ್ಟಿಗೆದ್ದ ಪೋಷಕರು ವಿಮಾನನಿಲ್ದಾಣದ ಆವರಣದಲ್ಲಿಯೇ ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ ತೆಲಂಗಾಣ ಗೃಹ ಸಚಿವ ಎನ್.ನರಸಿಂಹ ರೆಡ್ಡಿ ಅವರಿಗೆ ಘೇರಾವ್್ ಹಾಕಿದರು.
ಕಣ್ಣ ಮುಂದೆಯೇ ತೇಲಿಹೋದರು: ‘ಸಂಜೆ 5.30ರ ಸಮಯ. ಬಂಡೆಗಳ ಮೇಲೆ ಕೂತು ಛಾಯಾಚಿತ್ರ ತೆಗೆಯುತ್ತಿದ್ದೆವು. ನದಿಯ ಮಧ್ಯದಲ್ಲಿ ಬೃಹತ್ ಬಂಡೆಗಲ್ಲು ಇದೆ. ಆ ಬಂಡೆಗಲ್ಲು ಏರಬೇಕು ಎನ್ನುವುದು ಎಲ್ಲರ ಬಯಕೆಯಾಗಿತ್ತು. ಕೆಲವರು ಸಣ್ಣ ಸಣ್ಣ ಬಂಡೆಗಳ ಮೇಲೆ ಹೆಜ್ಜೆ ಇಡುತ್ತ ಅತ್ತ ಹೋಗುತ್ತಿದ್ದರು. ಸುಮಾರು ಹತ್ತು ನಿಮಿಷದ ಬಳಿಕ ಏಕಾಏಕಿ ನೀರಿನ ಮಟ್ಟ ಏರತೊಡಗಿತು. ಕೂಡಲೇ ನಾನು ದಡ ಸೇರಿ ಎಲ್ಲರನ್ನೂ ಎಚ್ಚರಿಸಿದೆ. ನನ್ನ ಕಣ್ಣ ಮುಂದೆಯೇ 15ರಿಂದ 20 ವಿದ್ಯಾರ್ಥಿಗಳು ತೇಲಿಹೋದರು. ಲಾರ್ಜಿ ಜಲಾಶಯದಿಂದ ನೀರು ಬಿಡುವ ಬಗ್ಗೆ ಯಾರೂ ಮುನ್ಸೂಚನೆ ನೀಡಲಿಲ್ಲ. ಅಲ್ಲದೇ ನದಿ ದಂಡೆಯಲ್ಲಿ ಅಪಾಯದ ಮಟ್ಟ ಸೂಚಿಸುವ ಫಲಕವೂ ಇರಲಿಲ್ಲ’ ಎಂದು ವಿದ್ಯಾರ್ಥಿ ಸುಹರ್ಷ ಹೇಳಿದ್ದಾರೆ.
ಐವರ ಶವ ಪತ್ತೆ: 24 ವಿದ್ಯಾರ್ಥಿಗಳ ಪೈಕಿ ಐವರ ಮೃತದೇಹಗಳು ಪತ್ತೆಯಾಗಿವೆ.
ಶೋಧ ಕಾರ್ಯ: ಪೊಲೀಸ್, ಗೃಹ ರಕ್ಷಕ ದಳ ಮತ್ತು ಸ್ಥಳೀಯ ಈಜುಗಾರರನ್ನು ಒಳಗೊಂಡ ಎಸ್ಎಸ್ಬಿ ತಂಡ ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರಿಸಿದೆ. ನೀರಿನ ಸೆಳೆತ ಹೆಚ್ಚಿರುವುದರಿಂದ ಕೊಚ್ಚಿ ಹೋಗಿರುವ ವಿದ್ಯಾರ್ಥಿ ಗಳು ಬದುಕುಳಿದಿರುವ ಸಾಧ್ಯತೆ
ಕಡಿಮೆ. ದೋಣಿ ಸಂಖ್ಯೆ ಕಡಿಮೆ ಇರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೂ ಸಿಬ್ಬಂದಿ ನದಿಯುದ್ದಕ್ಕೂ ಶೋಧ ನಡೆಸುತ್ತಿದ್ದಾರೆ’ ಎಂದು ಎಸ್ಎಸ್ಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಕೇಂದ್ರ ಗೃಹ ಸಚಿವಾಲಯ ಘಟನೆ ಕುರಿತು ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.
ಅನುಮತಿ ಪಡೆಯಲಾಗಿತ್ತು: ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಲು ವಿದ್ಯಾರ್ಥಿಗಳ ಪಾಲಕರಿಂದ ಅನುಮತಿ ಪಡೆಯಲಾಗಿತ್ತು ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.