ಈರೋಡ್/ತಮಿಳುನಾಡು(ಪಿಟಿಐ): ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಡಿಎಂಕೆ ಮುಖಂಡ ಎನ್.ಕೆ.ಕೆ.ಪಿ. ರಾಜಾ ಹಾಗೂ ಇತರೆ ನಾಲ್ವರನ್ನು ಗುರುವಾರ ಬಂಧಿಸಲಾಗಿದೆ.
ಭೂ ಕಬಳಿಕೆ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ಡಿಎಂಕೆ ಪಕ್ಷಕ್ಕೆ ಸೇರಿದ ಎರಡನೇ ಮುಖಂಡ ಇವರಾಗಿದ್ದು, ಜುಲೈ 30ರಂದು ವೀರಪಾಂಡಿ ಆರ್ಮುಗಂ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಕೈಮಗ್ಗ ಸಚಿವರಾಗಿದ್ದ ರಾಜಾ, ಈರೋಡ್ ಮಹಾನಗರ ಪಾಲಿಕೆ ಮೇಯರ್ ಕೆ.ಕುಮಾರ ಮುರುಗೇಶ್, ಡಿಎಂಕೆ ಜಿಲ್ಲಾ ಉಪ ಕಾರ್ಯದರ್ಶಿ ಒ.ಸಿ. ವಿಶ್ವನಾಥನ್, ಇವರ ಪುತ್ರರಾದ ರಾಜೇಂದ್ರನ್ ಮತ್ತು ಸುಬ್ರಮಣಿಯಮ್ ಅವರನ್ನು ವಿಶೇಷ ಪೊಲೀಸ್ ಪಡೆ ಗುರುವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ.
`2007ರಲ್ಲಿ ರಾಜಾ ಸೇರಿದಂತೆ 11 ಜನರು ತಮ್ಮ ಮನೆಗೆ ನುಗ್ಗಿ, ಥೆಂಡ್ರಾಲ್ ನಗರದಲ್ಲಿರುವ ನನಗೆ ಸೇರಿದ 60.5 ಎಕರೆ ಜಮೀನನ್ನು ಬಲವಂತವಾಗಿ ಬರೆಸಿಕೊಂಡಿದ್ದರು. ಮತ್ತು ಸುಬ್ರಮಣಿಯಮ್ ಎಂಬುವರಿಂದ ಸಾಲ ಪಡೆದು ಆತನಿಗೆ ನೀಡಿದ್ದರು. ಹಾಗೂ ನನಗೆ ಜಮೀನಿನ ಹಣ ಕೂಡ ಸಂದಾಯ ಮಾಡಿರಲಿಲ್ಲ~ ಎಂದು ರಾಮಸ್ವಾಮಿ ಎಂಬುವವರು ಕೆಲವು ದಿನಗಳ ಹಿಂದೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ.