ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಮಸೂದೆ: ಸದನದಲ್ಲಿ ಭಾರಿ ಗದ್ದಲ

Last Updated 24 ಫೆಬ್ರುವರಿ 2015, 10:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿವಾದಿತ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲು ಪ್ರಯತ್ನಿಸಿತು. ಆದರೆ, ಇದಕ್ಕೆ ಎನ್‌ಡಿಎ ಮೈತ್ರಿ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಯಿತು.

‘ಸುಗ್ರೀವಾಜ್ಞೆಯ ಮೂಲಕ ಅಂಗೀಕರಿಸಲಾದ ಈ ಜನ ವಿರೋಧಿ ಮಸೂದೆ ಕೈಬಿಡಬೇಕು, ಇದು ಸಂಪೂರ್ಣ ರೈತ ವಿರೋಧಿ ಮತ್ತು ಬಡವರ ವಿರೋಧಿ ಮಸೂದೆ’ ಎಂದು ಘೋಷಣೆಗಳನ್ನು ಕೂಗಿ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.

ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಗ್ರಾಮೀಣಾಭಿವೃದ್ಧಿ ಸಚಿವ ಬಿರೇಂದರ್‌ ಸಿಂಗ್‌ ಅವರು, ಈ ಮಸೂದೆ ಮಂಡಿಸಲು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರ ಪರವಾನಗಿ ಕೋರಿದರು. ಆದರೆ, ಕಾಂಗ್ರೆಸ್‌, ಎಸ್‌ಪಿ, ಟಿಎಂಸಿ, ಎಎಪಿ, ಆರ್‌ಜೆಡಿ ಮತ್ತು ಎಡಪಕ್ಷಗಳ ಸದಸ್ಯರು ಇದಕ್ಕೆ ಭಾರಿ  ವಿರೋಧ ವ್ಯಕ್ತಪಡಿಸಿದರು. ಸ್ಪೀಕರ್‌ ಧ್ವನಿ ಮತದ ಮೂಲಕ ಮಸೂದೆ ಮಂಡಿಸಲು ಬಿರೇಂದರ್‌ ಸಿಂಗ್‌ ಅವರಿಗೆ ಅವಕಾಶ ನೀಡಿದರು. ತಕ್ಷಣವೇ ವಿರೋಧ ಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸದನದಿಂದ ಹೊರನಡೆದರು.

ಎನ್‌ಡಿಎ ಮೈತ್ರಿಕೂಟದಲ್ಲಿರುವ  ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಮುಖಂಡ ರಾಜು ಶೆಟ್ಟಿ ಅವರು, ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. ಇದು ಇಡೀ ದೇಶದ ರೈತ ಸಮುದಾಯವನ್ನೇ ನಿರ್ನಾಮ ಮಾಡಲಿದೆ ಎಂದರು. 

ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯನಾಯ್ಡು ಅವರು, ಭೂಸ್ವಾಧೀನ ಮಸೂದೆಗೆ ಅಗತ್ಯವಿರುವ ಕೆಲವು ತಿದ್ದುಪಡಿಗಳನ್ನು ಮಾಡಲು ಸರ್ಕಾರ ಸಿದ್ಧವಿದೆ ಎಂದು ಪ್ರತಿಪಕ್ಷಗಳ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಪ್ರತಿಭಟನಾ ನಿರತರು ಇದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ವಿರೋಧ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡುತ್ತಿವೆ ಎಂದು ನಾಯ್ಡು ಆರೋಪಿಸಿದರು.

ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು, ‘ಇದು ಸಂಪೂರ್ಣವಾಗಿ ಜನ ವಿರೋಧಿ ಮಸೂದೆ. ಸುಗ್ರೀವಾಜ್ಞೆಯ ಮೂಲಕ ಮಸೂದೆ ಜಾರಿಗೊಳಿಸುವ ಮೊದಲು ಸರ್ಕಾರ ವಿರೋಧ ಪಕ್ಷಗಳ ಸಲಹೆ ಕೇಳಬೇಕಿತ್ತು. ಆದರೆ, ಸರ್ವಾಧಿಕಾರಿಯಾಗಿ ಯಾರನ್ನೂ ಕೇಳದೆ ತಾನು ಮಾಡಿದ್ದೇ ಸರಿ ಎನ್ನುವಂತೆ ಮಸೂದೆ ಜಾರಿಗೆ ತಂದಿದೆ’ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

ಹಿಂದೆ ಸರಿಯಲ್ಲ: ಸುಗ್ರೀವಾಜ್ಞೆಯ ಮೂಲಕ ಅಂಗೀಕರಿಸಲಾದ ಮಸೂದೆಗಳನ್ನು ಬಜೆಟ್‌ ಅಧಿವೇಶನದಲ್ಲಿ ಮಂಡಿಸುವ ಬಿಜೆಪಿಯ ಯತ್ನಕ್ಕೆ ಮೊದಲ ಹಂತದಲ್ಲೇ ಹಿನ್ನಡೆಯಾಗಿದೆ. ಆದರೆ,  ಭೂಸ್ವಾಧೀನ ತಿದ್ದುಪಡಿ ಮಸೂದೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದನ್ನು ಮಂಡಿಸಿಯೇ ತೀರುತ್ತೇವೆ. ಇದು ರೈತಸ್ನೇಹಿ ಮಸೂದೆ. ವಿರೋಧ ಪಕ್ಷಗಳು ಸುಮ್ಮನೆ ಹುಯಿಲೆಬ್ಬಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT