ಬರೇಲಿ(ಪಿಟಿಐ): ಮನೆಗೆ ಬೆಂಕಿ ಹೊತ್ತಿಕೊಂಡು ನಾಲ್ವರು ಸಹೋದರಿಯರು ಸೇರಿದಂತೆ ಆರು ಮಂದಿ ಅಪ್ರಾಪ್ತರು ಸಜೀವ ದಹನವಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಶುಕ್ರವಾರ ಬೆಳಗಿನಜಾವ ಸಂಭವಿಸಿದೆ.
ಕುಟುಂಬದ ರಾಜ್ ಕಶ್ಯಪ್ ಹಾಗೂ ಆತನ ಪತ್ನಿ, ಪಿಲಿಬಿತ್ನಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು. ಮನೆಯಲ್ಲಿ ಉಳಿದಿದ್ದ ನಾಲ್ವರು ಸಹೋದರಿಯರು ಹಾಗೂ ಇಬ್ಬರು ಸಂಬಂಧಿಕರ ಮಕ್ಕಳು ಮಲಗಿದ್ದಾಗ ಬೆಳಗಿನಜಾವ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟ ಎಲ್ಲರೂ 7ರಿಂದ 17 ವರ್ಷದೊಳಗಿನವರು.
ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ನೆರೆ–ಹೊರೆಯವರು ಮನೆಯ ಬಾಗಿಲು ಮುರಿದು ಮಕ್ಕಳನ್ನು ಹೊರ ಕರೆ ತರಲು ಯತ್ನಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಬೆಂಕಿ ಹೊತ್ತಿಕೊಂಡಿದ್ದ ಮನೆಯ ಚಾವಣಿ ಕುಸಿದು ಮಕ್ಕಳು ಅಸುನೀಗಿದ್ದಾರೆ. ರಾತ್ರಿ ಮಲಗುವಾಗ ಹಚ್ಚಿಟ್ಟಿದ್ದ ಮೊಂಬತ್ತಿಯನ್ನು ಆರಿಸದೆ ಹಾಗೆಯೆ ಬಿಟ್ಟಿರುವುದು ಈ ಅವಘಟಕ್ಕೆ ಕಾರಣ ಎಂದು ಸ್ಥಳೀಯರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.