ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಅಕ್ರಮ ಸಂಪತ್ತು ಗಳಿಕೆ ಸಂಬಂಧಿತ ಖಟ್ಲೆಯನ್ನು ರದ್ದು ಪಡಿಸಿದ ತನ್ನ ತೀರ್ಪಿನ ಬಗ್ಗೆ ಸ್ಪಷ್ಟನೆ ಕೇಳಿದ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ಮಂಗಳವಾರ ಮಾಯಾವತಿ, ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿತು.
~ನಾವು ಯಾರನ್ನೂ ರಕ್ಷಿಸಲು ಯತ್ನಿಸುತ್ತಿಲ್ಲ~ ಎಂದು ಅಕ್ರಮ ಸಂಪತ್ತು ಗಳಿಕೆ ಪ್ರಕರಣವನ್ನು ಉಲ್ಲೇಖಿಸುತ್ತಾ ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡಿತು.
ಮಾಯಾವತಿ ಅವರ ವಿರುದ್ಧದ ಅಕ್ರಮ ಸಂಪತ್ತು ಗಳಿಕೆ ಪ್ರಕರಣದ ವಿಚಾರಣೆ ನಡೆಸಲು ಸಿಬಿಐ ಮುಕ್ತವಾಗಿದೆ ಎಂದು ತನ್ನ ತೀರ್ಪಿನ ಬಗ್ಗೆ ಸ್ಪಷ್ಟನೆ ನೀಡುತ್ತಾ ಸುಪ್ರೀಂಕೋರ್ಟ್ ಹೇಳಿತು.
ಅಕ್ರಮ ಸಂಪತ್ತು ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಾವತಿ ವಿರುದ್ಧ ಸಲ್ಲಿಸಲಾಗಿದ್ದ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ರದ್ದು ಪಡಿಸಿದ ತನ್ನ ಹಿಂದಿ ತೀರ್ಪಿನ ಪುನರ್ ಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿತು.
ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ಕಾಲದಲ್ಲಿ ತನ್ನ ತೀರ್ಪಿನ ಬಗ್ಗೆ ಸ್ಪಷ್ಟನೆ ನೀಡಲು ಸಿದ್ಧ ಎಂಬುದಾಗಿ ಪದೇ ಪದೇ ಹೇಳಿದ ಸುಪ್ರೀಂಕೋರ್ಟ್ ಅಕ್ರಮ ಸಂಪತ್ತು ಗಳಿಕೆ ಪ್ರಕರಣದ ತನಿಖೆ ಮುಂದುವರಿಸಿ ತಾರ್ಕಿಕ ಅಂತ್ಯ ನೀಡಲು ತನ್ನ ತೀರ್ಪು ಸಿಬಿಐಗೆ ಅಡ್ಡಿಯಲ್ಲ ಎಂದು ಹೇಳಿತು.