ನಾಗಪುರ (ಪಿಟಿಐ): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂ ಹಗರಣದಲ್ಲಿ ಸಿಲುಕಿ ಬಂಧಿತರಾಗಿರುವುದರಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಇಲ್ಲಿ ಒಪ್ಪಿಕೊಂಡರು.ಭ್ರಷ್ಟಾಚಾರದ ವಿರುದ್ಧದ ತಮ್ಮ `ಜನಚೇತನ ಯಾತ್ರೆ~ ಇಲ್ಲಿಗೆ ಬಂದ ಸಂದರ್ಭದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಯಡಿಯೂರಪ್ಪ ಕುರಿತು ಸುದ್ದಿಗಾರರು ಕೇಳಿದಾಗ ಆರಂಭದಲ್ಲಿ ಅವರು ಪ್ರಶ್ನೆಯಿಂದ ನುಣುಚಿಕೊಳ್ಳಲು ಯತ್ನಿಸಿದರು. ಆದರೆ ನಂತರ ಪಕ್ಷಕ್ಕೆ ಮುಜುಗರವಾಗಿರುವುದನ್ನು ಒಪ್ಪಿಕೊಂಡರು.
`ನಮ್ಮ ದೌರ್ಬಲ್ಯಗಳನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ. ಕರ್ನಾಟಕದಲ್ಲಿ ಆದ ಬೆಳವಣಿಗೆಯೇ ಇದಕ್ಕೆ ನಿದರ್ಶನ. ಸಣ್ಣ ಪುಟ್ಟ ತಪ್ಪುಗಳಿಂದ ಪಕ್ಷಕ್ಕೆ ಮುಜುಗರವಾದ ಸಂದರ್ಭದಲ್ಲೇ ಯಡಿಯೂರಪ್ಪ ಅವರಿಗೆ ವರಿಷ್ಠರು ಎಚ್ಚರಿಕೆ ನೀಡಿದ್ದರು. ಲೋಕಾಯುಕ್ತ ವರದಿ ಸಲ್ಲಿಕೆಯಾಗುತ್ತಿದ್ದಂತೆ ಅವರು ರಾಜೀನಾಮೆ ನೀಡಬೇಕಾಯಿತು~ ಎಂದರು.