ಮುಂಬೈ (ಪಿಟಿಐ): ಭೂಗತಪಾತಕಿ ರವಿ ಪೂಜಾರಿ ಪತ್ನಿ ಮತ್ತು ಮಗನನ್ನು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀದೇವಿ ಸಂತೋಷ್ ಪೂಜಾರಿ ಹಾಗೂ ಆರ್ಯನ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜಾರಿ ಸಹಚರರು ಮೈಸೂರು ನ್ಯಾಯಾಲಯಕ್ಕೆ
(ಮೈಸೂರು ವರದಿ): ಮಂಗಳೂರಿನ ಭೂಗತ ಪಾತಕಿ ರವಿ ಪೂಜಾರಿ ಸಹಚರರನ್ನು ನಗರದ ೩ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮಂಗಳವಾರ ಹಾಜರುಪಡಿಸಲಾಯಿತು.
ಮಂಗಳೂರಿನ ಬಿಲ್ಡರ್ ಹಾಗೂ ಭಾರತಿ ಡೆವಲಪರ್ ಮಾಲೀಕ ಜೋನ್ ಪ್ಯಾಟ್ರಿಕ್ ಎಂಬುವರನ್ನು ರವಿ ಪೂಜಾರಿ ಸಹಚರರು ಹತ್ಯೆ ಮಾಡಲು ಯತ್ನಿಸಿದ ಆರೋಪದ ಮೇಲೆ ೯ ಮಂದಿ ವಿರುದ್ಧ ದೂರು ದಾಖಲಾಗಿತ್ತು. ಈ ಪೈಕಿ 7 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.
ನಂತರ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕಳೆದ ಜನವರಿ ತಿಂಗಳಲ್ಲಿ ನಡೆದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು, ಸಾವಿನ ದವಡೆಯಿಂದ ಪಾರಾಗಿದ್ದ ಜೋನ್ ಪ್ಯಾಟ್ರಿಕ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಅವರು ನೀಡಿದ ದೂರಿನ ಮೇರೆಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು.
ರವಿ ಪೂಜಾರಿಯ ಸಹಚರರ ವಿರುದ್ಧ ಸಂಘಟಿತ ಅಪರಾಧ ತಡೆ ಕಾಯ್ದೆ (ಪೋಕ) ಅಡಿ ದೂರು ದಾಖಲಾಗಿತ್ತು. ಪೋಕ ಅಡಿ ದಾಖಲಾದ ಪ್ರಕರಣ ವಿಚಾರಣೆ ನಡೆಸಲು ಮೈಸೂರು ನ್ಯಾಯಾಲಯದಲ್ಲಿ ಮಾತ್ರ ಅವಕಾಶವಿದೆ. ಹೀಗಾಗಿ, ಆರೋಪಿಗಳನ್ನು ಮೈಸೂರಿಗೆ ಕರೆತರಲಾಗಿತ್ತು.