ನವದೆಹಲಿ: ರಾಷ್ಟ್ರಪತಿ ಚುನಾವಣೆ ‘ಸಂಕುಚಿತ ಮನೋಭಾವ, ವಿಭಜಿಸುವ ಮತ್ತು ಕೋಮು ದೃಷ್ಟಿಕೋನ’ದ ವಿರುದ್ಧದ ಹೋರಾಟ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.
ಸೋಮವಾರ ರಾಷ್ಟ್ರಪತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕರು, ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್, ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಈ ಹೋರಾಟದಲ್ಲಿ ಸಂಖ್ಯೆಗಳು ನಮ್ಮ ವಿರುದ್ಧವಾಗಿರಬಹುದು. ಆದರೆ, ಪ್ರಬಲ ಹೋರಾಟ ನಡೆಸಬೇಕು. ಭಾರತವನ್ನು ‘ಸಂಕುಚಿತ ಮನೋಭಾವ, ವಿಭಜಿಸುವ ಮತ್ತು ಕೋಮು ದೃಷ್ಟಿಕೋನ’ವನ್ನು ಹೇರುವವರ ಒತ್ತೆಯಾಳಾಗಲು ಬಿಡಬಾರದು’ ಎಂದು ಸೋನಿಯಾ ಹೇಳಿದರು.
ರಾಷ್ಟ್ರಪತಿ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದೆ. ಎನ್ಡಿಎ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ಕಣದಲ್ಲಿದ್ದರೆ, ಪ್ರತಿಪಕ್ಷದ ಅಭ್ಯರ್ಥಿಯಾಗಿ ಮೀರಾ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಜುಲೈ 20ರಂದು ಮತ ಎಣಿಕೆ ನಡೆಯಲಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5ರಂದು ಚುನಾವಣೆ ನಡೆಯಲಿದೆ.