ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪದಚ್ಯುತಿಗೆ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸಲ್ಲಿಸಿದ್ದ ವಾಗ್ದಂಡನೆ ನಿಲುವಳಿ ನೋಟಿಸ್ ಅನ್ನು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಸೋಮವಾರ ತಿರಸ್ಕರಿಸಿದ್ದಾರೆ.
ನಾಲ್ಕು ದಿನಗಳಲ್ಲೇ ನೋಟಿಸ್ ತಿರಸ್ಕರಿಸಿರುವ ನಾಯ್ಡು ಅವರು, ರಾಜಕೀಯ ಮತ್ತು ನ್ಯಾಯಾಂಗ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆಗೆ ವಿರೋಧ ಪಕ್ಷಗಳು ನೀಡಿದ ಕಾರಣಗಳು ಸಮರ್ಪಕವಾಗಿಲ್ಲ ಮತ್ತು ವಾಸ್ತವಾಂಶಗಳಿಂದ ಕೂಡಿಲ್ಲ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ಈ ನಡೆಯನ್ನು ಸ್ವಾಗತಿಸಿದ್ದು, ವಿರೋಧ ಪಕ್ಷಗಳು ಕಾನೂನು ಹೋರಾಟ ನಡೆಸುವುದಾಗಿ ಹೇಳಿವೆ.
ಹೈದರಾಬಾದ್ ಭೇಟಿ ಮೊಟಕುಗೊಳಿಸಿ ಭಾನುವಾರ ನವದೆಹಲಿಗೆ ಧಾವಿಸಿದ್ದ ನಾಯ್ಡು, ಸಂಸದೀಯ ವ್ಯವಹಾರಗಳ ಪರಿಣತರು, ಕಾನೂನು ಮತ್ತು ಸಂವಿಧಾನ ತಜ್ಞರ ಜತೆ ಈ ಕುರಿತು ಸಮಾಲೋಚನೆ ನಡೆಸಿದ್ದರು.