ಅದೇ ಹುದ್ದೆ ಕೇಳುವಂತಿಲ್ಲ: ಸುಪ್ರೀಂ
ನವದೆಹಲಿ (ಪಿಟಿಐ): ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾಗೊಂಡ ಉದ್ಯೋಗಿ ಕ್ರಿಮಿನಲ್ ನ್ಯಾಯಾಲಯದಿಂದ ದೋಷ ಮುಕ್ತಗೊಂಡರೂ ಪುನಃ ಅದೇ ಹುದ್ದೆ ಬೇಕು ಎಂದು ‘ಹಕ್ಕು’ ಸಾಧಿಸುವಂತಿಲ್ಲ ಎಂದು ಎಂದು ‘ಸುಪ್ರೀಂ’ಕೋರ್ಟ್ ಹೇಳಿದೆ. ‘ಉದ್ಯೋಗಿ ಕ್ರಿಮಿನಲ್ ನ್ಯಾಯಾಲದಿಂದ ದೋಷಮುಕ್ತಗೊಂಡರೆ ಉದ್ಯೋಗಿಗೆ ತನ್ನಿಂತಾನೆ ಆ ಹುದ್ದೆ ಸಿಗುತ್ತದೆ ಎನ್ನುವ ಬಗ್ಗೆ ಯಾವುದೇ ನಿಯಮ ಇಲ್ಲ’ ಎಂದು ಎಂದು ನ್ಯಾಯಮೂರ್ತಿ ಕೆ.ಎಸ್.ರಾಧಾಕೃಷ್ಣನ್ ಮತ್ತು ಎ.ಕೆ.ಸಿಕ್ರಿ ಅವರನ್ನೊಳಗೊಂಡ ಪೀಠ ಹೇಳಿದೆ.
ಅಮ್ರೋಹಿ ಆಸ್ತಿ ಮಾರಾಟಕ್ಕೆ ತಡೆ
ಮುಂಬೈ (ಪಿಟಿಐ): ಚಿತ್ರ ನಿರ್ಮಾಪಕ ದಿವಂಗತ ಕಮಲ್ ಅಮ್ರೋಹಿ ಅವರ ಹಿರಿಯ ಪುತ್ರ ಶಾಂದಾರ್ ಅಮ್ರೋಹಿ ಅವರ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಮತ್ತು ಮೂರನೇ ವ್ಯಕ್ತಿಗೆ ಆಸ್ತಿ ಹಕ್ಕುಗಳನ್ನು ನೀಡುವುದಕ್ಕೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
2011ರ ಆಗಸ್ಟ್ನಲ್ಲಿ ನಿಧನರಾಗಿದ್ದ ಶಾಂದಾರ್ ಅಮ್ರೋಹಿ ಅವರಿಗೆ ನೀಡಿದ್ದ ₨2 ಕೋಟಿ ಸಾಲ ಹಾಗೂ ₨80 ಲಕ್ಷ ಬಡ್ಡಿ ಮೊತ್ತವನ್ನು ವಾಪಸ್ ಕೊಡಿಸಬೇಕು ಎಂದು ಬಾಲಿವುಡ್ ನಟಿ ಪ್ರೀತಿ ಜಿಂಟಾ ಹೈಕೋರ್ಟ್ಗೆ ಕಳೆದ ತಿಂಗಳು ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಕೆ. ಕಥವಾಲಾ ಅವರು, ಜನವರಿ 6ರೊಳಗೆ ಪ್ರಮಾಣ ಪತ್ರಗಳನ್ನು ಸಲ್ಲಿಸುವಂತೆ ಶಾಂದಾರ್ ಅಮ್ರೋಹಿ ಅವರ ಆಸ್ತಿಯ ವಾರಸುದಾರರು ಮತ್ತು ಪತ್ನಿ ಶಾಹಿದಾ ಅಮ್ರೋಹಿ ಅವರಿಗೆ ನಿರ್ದೇಶಿಸಿದರು. ಜೊತೆಗೆ, ಶಾಂದಾರ್ ಅಮ್ರೋಹಿ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳ ವಿವರ ನೀಡುವಂತೆಯೂ ಸೂಚಿಸಿದರು. ಪ್ರಕರಣದ ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಲಾಗಿದೆ.
ಗಂಗೂಲಿ ರಾಜೀನಾಮೆಗೆ ಆಗ್ರಹ
ಕೋಲ್ಕತ್ತ (ಪಿಟಿಐ): ಕಾನೂನು ತರಬೇತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರು ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಆಯೋಗದ (ಡಬ್ಲ್ಯುಬಿಎಚ್ಆರ್ಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಗ್ರಹಿಸಿದೆ.
ಪಾರಾದೀಪ್ ಬಂದರು ಜಟ್ಟಿ ಕುಸಿತ
ಕೇಂದ್ರಪಾರ, ಒಡಿಶಾ (ಪಿಟಿಐ): ‘ಫೈಲಿನ್’ ಚಂಡಮಾರುತ ಅಪ್ಪಳಿಸಿದ ಒಂದು ವಾರಗಳ ನಂತರ ರಾಜ್ಯದ ಅತಿದೊಡ್ಡ ಪಾರಾದೀಪ್ ಮೀನುಗಾರಿಕಾ ಬಂದರಿನ ಜಟ್ಟಿ ಕುಸಿದಿದೆ. ಸುಮಾರು 45 ಮೀಟರ್ ಉದ್ದದ ಜಟ್ಟಿ ಕುಸಿದಿದ್ದು, ‘ಪ್ರಾಥಮಿಕ ಮಾಹಿತಿಯ ಪ್ರಕಾರ ₨ 10 ಕೋಟಿ ನಷ್ಟ ಆಗಿದೆ’ ಎಂದು ಪಾರಾದಿಪ್ ಬಂದರು ಅಧಿಕಾರಿ ರಂಜಿತ್ ಕಿಶೋರ್ ದಾಸ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.