ನವದೆಹಲಿ: ರೈಲು ನಿಲ್ದಾಣಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿ ಬೆಂಗಳೂರು ಸೇರಿದಂತೆ ದೇಶದ ಐದು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಚಂಡೀಗಡ, ಸಿಕಂದರಾಬಾದ್, ಆನಂದವಿಹಾರ್ ಮತ್ತು ಪುಣೆ ರೈಲು ನಿಲ್ದಾಣಗಳು ಯೋಜನೆ ಅಡಿ ಆಯ್ಕೆಯಾಗಿರುವ ಇತರ ನಿಲ್ದಾಣಗಳಾಗಿವೆ.
ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವ ಇಲಾಖೆ, ನಿಲ್ದಾಣಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಿದೆ.
ನಿಲ್ದಾಣದಲ್ಲಿ ಪ್ರಮುಖವಾಗಿರುವ ಟಿಕೆಟ್ ತಪಾಸಣೆ, ಟಿಕೆಟ್ ಮಾರಾಟ, ಘೋಷಣೆ ಮತ್ತು ರೈಲುಗಳ ಸಂಚಾರ ನಿರ್ವಹಣೆ ಕಾರ್ಯವನ್ನು ಇಲಾಖೆಯೇ ನೋಡಿಕೊಳ್ಳಲಿದ್ದು, ಸ್ವಚ್ಛತೆ, ಆಹಾರ ಪೂರೈಕೆ, ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ ಮತ್ತು ನಿರ್ವಹಣೆಯಂತಹ ಕಾರ್ಯವನ್ನು ಖಾಸಗಿಯವರಿಗೆ ವಹಿಸಲು ನಿರ್ಧರಿಸಲಾಗಿದೆ.
ಸ್ವಚ್ಛತೆ ಮತ್ತಿತರ ಕಾರ್ಯದಲ್ಲಿ ತೊಡಗಿರುವ ರೈಲ್ವೆ ಇಲಾಖೆಯ ಸಿಬ್ಬಂದಿಯನ್ನು ಪ್ರಯಾಣಿಕರ ಸೇವೆಗಳ ಸುಧಾರಣೆಗಾಗಿ ಬಳಸಿಕೊಳ್ಳಲಾಗುವುದು. ಈ ಮೂಲಕ ಇಲಾಖೆಯ ಸಿಬ್ಬಂದಿ ಮೇಲಿನ ಒತ್ತಡವನ್ನೂ ಕಡಿಮೆ ಮಾಡಲಾಗುವುದು ಎಂದು ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಲೋಹಿಯಾ ತಿಳಿಸಿದ್ದಾರೆ.
ಮೆಟ್ರೋ ರೈಲು ನಿಲ್ದಾಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಇಲಾಖೆಯು ಈಗಾಗಲೇ ಖಾಸಗಿ ಸಹಭಾಗಿತ್ವ ಹೊಂದಲಾಗಿದೆ. ರೈಲು ನಿಲ್ದಾಣಗಳ ನಿರ್ವಹಣೆ ಕುರಿತು ಇದೇ ಮೊದಲ ಬಾರಿಗೆ ಇಲಾಖೆಯು ಖಾಸಗಿ ಸಹಭಾಗಿತ್ವ ಹೊಂದಲು ಮುಂದಾಗಿದೆ. ರೈಲ್ವೆ ಇಲಾಖೆಗೆ ಸೇರಿರುವ ಖಾಲಿ ಜಾಗೆಯಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಉದ್ದೇಶದ ಅಪಾರ್ಟ್ಮೆಂಟ್ಗಳ ನಿರ್ಮಾಣಕ್ಕೂ ರೈಲ್ವೆ ಮಂಡಳಿಯು ಖಾಸಗಿಯವರಿಗೆ ಅನುಮತಿ ನೀಡುವ ಮೂಲಕ ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದುಎಂದರು.