ಪುಣೆ (ಪಿಟಿಐ): ‘ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಿ’ ಎಂದು ಭೂ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು ರಾಷ್ಟ್ರೀಯ ಸೇನಾ ಅಕಾಡೆಮಿ-ಯಲ್ಲಿ ನಿರ್ಗಮನ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿ, ಕರೆ ನೀಡಿದರು.
ನಮ್ಮ ನೆರೆಯ ದೇಶ ಈಚೆಗೆ ನಡೆಸಿದ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಯಾವುದೇ ರೀತಿಯ ಸಂದರ್ಭಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು. ಪ್ರಾದೇಶಿಕ ಶಾಂತಿ ಕಾಪಾಡಲು ಮತ್ತು ಸಾರ್ವಭೌಮತ್ವವನ್ನು ರಕ್ಷಣೆ ಮಾಡಲು ಸನ್ನದ್ಧತೆ ಮುಖ್ಯ ಎಂದು ಅವರು ಕಡಕವಾಸ್ಲಾದ ಸೇನಾ ಅಕಾಡೆಮಿಯ 127ನೇ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ತಿಳಿಸಿದರು.
ಸೇನೆಯ ಎಲ್ಲಾ ಮೂರು ವಿಭಾಗದ ಭವಿಷ್ಯತ್ತಿನ ಮುಖಂಡರು ಬಾಹ್ಯ ದಾಳಿ, ಆಂತರಿಕ ಭದ್ರತೆಗೆ ಒದಗುವ ಅಪಾಯ ಮತ್ತು ನೈಸರ್ಗಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧರಾಗಿ ಇರಬೇಕು ಎಂದು ಅವರು ಕರೆ ನಿಡಿದರು.
ತರಬೇತಿ ಹೊಂದಿದ 355 ಅಭ್ಯರ್ಥಿಗಳ ಪೈಕಿ ಅರ್ಪಿತ್ ಸಂಗ್ವಾನ್ ಅವರು ತರಬೇತಿಯ ಎಲ್ಲಾ ವಿಭಾಗಗಳಲ್ಲೂ ಉತ್ತಮ ಸಾಧನೆ ತೋರಿಸಿದ್ದರಿಂದ ರಾಷ್ಟ್ರಪತಿಗಳ ಪದಕ ಪಡೆದಿದ್ದಾರೆ.