ನವದೆಹಲಿ (ಪಿಟಿಐ): ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ನಾಲ್ಕು ತಿಂಗಳ ಗಡುವಿನೊಳಗೆ ದೇಶದಾದ್ಯಂತ 22 ಸಿಬಿಐ ನ್ಯಾಯಾಲಯ ಸ್ಥಾಪಿಸಿ ಕಾರ್ಯಾರಂಭ ಮಾಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ.
ಈ ಗಡುವಿನೊಳಗೆ ಸಿಬಿಐ ನ್ಯಾಯಾಲಯಗಳು ಕಾರ್ಯಾರಂಭವಾಗದಿದ್ದರೆ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸುಪ್ರೀಂಕೋರ್ಟ್ ನೀಡಿದೆ. ಭ್ರಷ್ಟಾಚಾರ ಪ್ರಕರಣಗಳನ್ನು ವೇಗವಾಗಿ ಮತ್ತು ತ್ವರಿತವಾಗಿ ವಿಲೇವಾರಿ ಮಾಡಲು ಈ ಸಿಬಿಐ ನ್ಯಾಯಾಲಯಗಳು ಅಗತ್ಯ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಸಿ. ನಾಗಪ್ಪನ್ ಅವರನ್ನೊಳಗೊಂಡ ಪೀಠ ಹೇಳಿದೆ.
‘ಎಲ್ಲಾ ಸಿಬಿಐ ನ್ಯಾಯಾಲಯಗಳು ಕಾರ್ಯನಿರ್ವಹಿಸುಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುತ್ತವೆ ಎಂಬ ನಿರೀಕ್ಷೆ ನಮ್ಮದು’ ಎಂದು ಪೀಠ ಹೇಳಿದೆ. ಮತ್ತೆ ಮತ್ತೆ ಆದೇಶ ನೀಡಿದರೂ ಸಾಕಷ್ಟು ಸಂಖ್ಯೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯಗಳನ್ನು ಸ್ಥಾಪಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಹಿಂದೆಯೂ ಅತೃಪ್ತಿ ವ್ಯಕ್ತಪಡಿಸಿತ್ತು.
ಎರಡು ತಿಂಗಳೊಳಗೆ ದೇಶದಾದ್ಯಂತ 22 ವಿಶೇಷ ಸಿಬಿಐ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಜನವರಿ 30ರಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಸಂಬಂಧಪಟ್ಟ ಪ್ರಾಧಿಕಾರಗಳು ಈ ಬಗ್ಗೆ ನೀಡಿದ್ದ ಕಾರಣಗಳು ಮತ್ತು ವಿವರಣೆಗಳು ತೃಪ್ತಿಕರವಲ್ಲ ಎಂದೂ ಕೋರ್ಟ್ ಆ ಸಂದರ್ಭದಲ್ಲಿ ಹೇಳಿತ್ತು.