ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿ-ಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಮಂಗಳವಾರ ರಾತ್ರಿ ದೂರವಾಣಿಯಲ್ಲಿ ಮಾತನಾಡಿ ಪೆಶಾವರ ಶಾಲೆ ಮೇಲಿನ ದಾಳಿಗೆ ಸಂತಾಪ ಸೂಚಿಸಿದ್ದಾರೆ. ‘ಈ ಘೋರ ದುರಂತವು ಇಡೀ ಜಗತ್ತಿನ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ. ಇದು ಇಡೀ ಮಾನವಕುಲದ ಮೇಲೆ ನಡೆದ ದಾಳಿ’ ಎಂದು ಮೋದಿ ಹೇಳಿದರು.
‘ಭಾರತ ಹಾಗೂ ಪಾಕಿಸ್ತಾನಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ ಕೈಜೋಡಿಸ-ಬೇಕು’ ಎಂದೂ ತಿಳಿಸಿದರು.
ಸಂಸತ್ನಲ್ಲಿ ಖಂಡನೆ: ಪೆಶಾವರ ಶಾಲೆ ಮೇಲೆ ನಡೆದ ಉಗ್ರರ ದಾಳಿಯನ್ನು ಸಂಸತ್ತಿನಲ್ಲಿ ಖಂಡಿಸಲಾಯಿತು. ಉಭಯ ಸದನಗಳಲ್ಲಿಯೂ ಮೌನ ಆಚರಿಸಲಾಯಿತು.