ನವದೆಹಲಿ (ಪಿಟಿಐ): 2 ಜಿ ಮತ್ತು ಕಲ್ಲಿದ್ದಲು ಹಗರಣ ಆರೋಪಿಗಳು ತಮ್ಮನ್ನು ಅಧಿಕೃತ ನಿವಾಸದಲ್ಲಿ ಭೇಟಿಯಾಗಲು ಅವಕಾಶ ಮಾಡಿಕೊಟ್ಟ ಆರೋಪಕ್ಕೆ ಸಿಲುಕಿರುವ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಶುಕ್ರವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದರು. ತಮ್ಮ ವಿರುದ್ಧದ ಆರೋಪಗಳಿಗೆ ಸಿನ್ಹಾ ಅವರ ಪ್ರತಿಕ್ರಿಯೆ ಈ ಪ್ರಮಾಣಪತ್ರದಲ್ಲಿ ದಾಖಲಾಗಿದೆ.
ತಮ್ಮ ವಿರುದ್ಧ ಕೇಳಿಬಂದಿರುವ ‘ಗಂಭೀರ ಆರೋಪ’ಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೆ.8ರಂದು ಸಿನ್ಹಾ ಅವರಿಗೆ ನಿರ್ದೇಶನ ನೀಡಿತ್ತು. ಇದೇ ವೇಳೆ, ‘ನ್ಯಾಯಪೀಠದ ಮುಂದೆ ಏನನ್ನೇ ಹೇಳಿಕೊಳ್ಳುವ ಮನಸ್ಸಿದ್ದರೂ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು’ ಎಂದೂ ಕೋರ್ಟ್ ಸೂಚಿಸಿತ್ತು.
ವಕೀಲ ಪ್ರಶಾಂತ್ ಭೂಷಣ್ ಅವರು ಸಿಬಿಐ ನಿರ್ದೇಶಕರ ನಿವಾಸಕ್ಕೆ ಭೇಟಿಯಾದವರ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇಲ್ಲಿನ ಜನಪಥ್ ರಸ್ತೆಯಲ್ಲಿರುವ ಸಿಬಿಐ ನಿರ್ದೇಶಕರ ಅಧಿಕೃತ ನಿವಾಸದ ಭದ್ರತೆಗೆ ನಿಯೋಜಿತವಾಗಿರುವ 23 ಐಟಿಬಿಪಿ (ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್) ಮತ್ತು ನಾಲ್ವರು ಸಿಬಿಐ ಕಾನ್ಸ್ಟೆಬಲ್ಗಳ ಪಟ್ಟಿಯನ್ನೂ ನ್ಯಾಯಪೀಠ ಪರಿಶೀಲನೆ ನಡೆಸಿದೆ.
ಮೇಲಿನ ಎರಡು ಹಗರಣಗಳ ಕೆಲವು ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿರುವ ರಂಜಿತ್ ಸಿನ್ಹಾ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕು ಎಂಬುದು ಸರ್ಕಾರೇತರ ಸಂಸ್ಥೆಯಾದ ‘ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್್ಟ ಲಿಟಿಗೇಷನ್’ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರ ವಾದವಾಗಿದೆ.