ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ದಲಿತರೇ ಹೆಚ್ಚು

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಒಂದು ವರ್ಷ  ಉಳಿದಿದ್ದು, ಸದ್ಯವೇ ಸರ್ಕಾರಕ್ಕೆ ಸಲ್ಲಿಕೆಯಾಗುವ ಜಾತಿ ಗಣತಿ ವರದಿ ಜಾತಿ ಸಮೀಕರಣದ ಲೆಕ್ಕಾಚಾರವನ್ನೇ ತಲೆಕೆಳಗು ಮಾಡುವ ಸಾಧ್ಯತೆಯಿದೆ.

ಸಮೀಕ್ಷೆಯ ಅಧಿಕೃತ ಅಂಕಿಅಂಶಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಅದರ ಪ್ರಕಾರ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 1.08 ಕೋಟಿ ಮತ್ತು ಪರಿಶಿಷ್ಟ ಪಂಗಡದ 40.45 ಲಕ್ಷ, ಮುಸ್ಲಿಮರು 70 ಲಕ್ಷ ಹಾಗೂ ಹಿಂದುಳಿದ ಸಮುದಾಯಕ್ಕೆ ಸೇರಿದ ಕುರುಬರು 45 ಲಕ್ಷ ಸಂಖ್ಯೆಯಲ್ಲಿದ್ದಾರೆ.

ಸಮೀಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಅಳತೆಗೋಲಿನಲ್ಲಿ ಕುರುಬ ಸಮುದಾಯವನ್ನು ‘ಅತ್ಯಂತ ಹಿಂದುಳಿದ ಸಮುದಾಯ’ ಎಂದು ಘೋಷಿಸಬೇಕು ಎಂದು ಶಿಫಾರಸು ಮಾಡುವ ಸಾಧ್ಯತೆ ಇದೆ. ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ನಡೆಸಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಜಾತಿ ಗಣತಿ ಮತ್ತು ಜಾತಿ ಮರು ವಿಂಗಡಣೆ ವರದಿ ತಯಾರಿಸಿದೆ. ಈ ಪೈಕಿ, 1,200 ಪುಟಗಳ ಜಾತಿ ಗಣತಿ ವರದಿ ಮುದ್ರಣಗೊಂಡಿದ್ದು, ಸದ್ಯದಲ್ಲೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.30 ಕೋಟಿ. ಆಯೋಗ ನಡೆಸಿದ ಸಮೀಕ್ಷೆಯ ವ್ಯಾಪ್ತಿಯಲ್ಲಿ 5.98 ಕೋಟಿ ಜನರು ಬಂದಿದ್ದು, 32 ಲಕ್ಷ ಜನರು ಹೊರಗುಳಿದಿದ್ದಾರೆ.

‘ಪರಿಶಿಷ್ಟರಲ್ಲಿ 101, ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳಿವೆ. ಸರ್ಕಾರ ಗುರುತಿಸಿರುವ 816  ಇತರ ಹಿಂದುಳಿದ ಜಾತಿಗಳು (ಓಬಿಸಿ) ಸೇರಿ ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ, ಈ ಜಾತಿಗಳಲ್ಲದೆ ಹೊಸದಾಗಿ 192 ಜಾತಿಗಳು ದಾಖಲಾಗಿವೆ’ ಎಂದು ಮೂಲಗಳು ತಿಳಿಸಿವೆ. ಈ ಪೈಕಿ, 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿ ಹೆಸರು ದಾಖಲಾಗಿವೆ. ತಪ್ಪು ಮಾಹಿತಿಯಿಂದ ಈ ರೀತಿ ಆಗಿರಬೇಕು ಎಂದು ಆಯೋಗ ಭಾವಿಸಿದೆ. ಹಲವು ಜಾತಿಗಳು ಇನ್ನೊಂದು ಸಮಾನಾಂತರ ಜಾತಿಗೆ ಹೋಲಿಕೆಯಾಗುತ್ತಿವೆ. 10ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 16 ಹೊಸ ಜಾತಿಗಳನ್ನು ಕುಲ ಶಾಸ್ತ್ರಜ್ಞರನ್ನು ಒಳಗೊಂಡ ವಿಷಯ ತಜ್ಞರ ಸಮಿತಿ ಪರಿಶೀಲಿಸಿ ವರದಿ ನೀಡಿದೆ. ಈ ಜಾತಿಗಳ ಪ್ರಸ್ತಾವ ಇತಿಹಾಸ ಪುಸ್ತಕಗಳಲ್ಲೂ ಇರುವುದನ್ನು ಪತ್ತೆ ಮಾಡಲಾಗಿದೆ. ಈ ಕಾರ್ಯಕ್ಕೆ ಒಂದು ವರ್ಷ ತಗಲಿದೆ. ಆದರೆ, ಇನ್ನೂ ಈ ಜಾತಿಗಳ ಕುರಿತು ಅಂತಿಮ ತೀರ್ಮಾನ ಆಗಿಲ್ಲ’.


55 ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. ಜಾತಿಗಳನ್ನು ಸಾಮಾಜಿಕ ನೆಲೆಯಲ್ಲಿ ಹಿಂದುಳಿಯುವಿಕೆ ಮತ್ತು ಶೈಕ್ಷಣಿಕ ಸ್ಥಿತಿಗತಿ ಆಧರಿಸಿ ಮರು ವಿಂಗಡಣೆ ಮಾಡಬೇಕಿದೆ.

ಒಂದರಿಂದ ಐದನೇ ತರಗತಿ, ಆರರಿಂದ 10ನೇ ತರಗತಿ, ಪಿಯು, ಪದವಿ, ತಾಂತ್ರಿಕ ಶಿಕ್ಷಣ ಪಡೆದವರು, ಶಾಲೆಯಿಂದ ಹೊರಗುಳಿದವರು ಹೀಗೆ ಶೈಕ್ಷಣಿಕ ಸ್ಥಿತಿಗತಿ ಹಾಗೂ ಸಾಮಾಜಿಕ ನೆಲೆಯಲ್ಲಿ ಅಸ್ಪೃಶ್ಯತೆ ಅನುಭವಿಸುತ್ತಿರುವವರು, ಜಾತಿಯ ಅಪಮಾನಕ್ಕೆ ಗುರಿಯಾಗಿರುವವರು,  ಅನಿಷ್ಟ (ಮಲ ಹೊರುವ) ಪದ್ಧತಿಗಳಿಗೆ ದೂಡಲ್ಪಟ್ಟವರು, ಕುಲಕಸುಬು ಮಾಡುತ್ತಿರುವವರು, ಅದರಿಂದ ದೂರ ಸರಿದವರು, ಕುಲಕಸುಬಿನಿಂದ ಆರೋಗ್ಯ ಸಮಸ್ಯೆಗೆ ತುತ್ತಾದವರು ಎಂಬ  ಅಳತೆಗೋಲಿನಲ್ಲಿ ಈ ಜಾತಿ ಅಥವಾ ಸಮುದಾಯಗಳನ್ನು ಪ್ರತ್ಯೇಕಿಸಲಾಗಿದೆ.

ಈ ಅಂಶಗಳಿಗೆ ನಿರ್ದಿಷ್ಟ ಅಂಕ ನೀಡಲಾಗಿದೆ. ಒಟ್ಟು 200 ಅಂಕಗಳಲ್ಲಿ ಯಾವ ಜಾತಿ ಎಷ್ಟು ಅಂಕ ಗಳಿಸಿದೆ ಎಂದು ಲೆಕ್ಕ ಮಾಡಿ 100 ಅಂಕದ ಒಳಗಿನವರು ಹಿಂದುಳಿದವರು, 100ರಿಂದ 150 ಮಧ್ಯೆ ಪಡೆದವರು ಅತಿ ಹಿಂದುಳಿದವರು, 150ಕ್ಕಿಂತ ಹೆಚ್ಚು ಅಂಕ ಪಡೆದವರು ಅತ್ಯಂತ ಹಿಂದುಳಿದವರು ಎಂದು ಗುರುತಿಸಲಾಗಿದೆ. ಇದರ ಆಧಾರದಲ್ಲಿ ಜಾತಿಗಳ ಮರು ವಿಂಗಡಣೆ ನಡೆಯಲಿದೆ’ ಎಂದೂ ಮೂಲಗಳು ತಿಳಿಸಿವೆ.
‘ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ –1995ರ ಪ್ರಕಾರ ಪ್ರತಿ 10 ವರ್ಷಗಳಿಗೊಮ್ಮೆ ಈ ಜಾತಿ ಮರು ವಿಂಗಡಣೆ ಆಗಬೇಕು. 25 ವರ್ಷಗಳಿಂದ ಈ ಪ್ರಕ್ರಿಯೆ ನಡೆದಿಲ್ಲ. ಹೊಸ ಪರಿಷ್ಕರಣೆಯಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ’ ಎಂದೂ ಹೇಳಿವೆ.

ಈಗಿರುವ ಜಾತಿ ವಿಂಗಡಣೆಯಲ್ಲಿ ಲೋಪ ಆಗಿರುವುದನ್ನು ಮರು ವಿಂಗ ಡಣೆ ವೇಳೆ ಗಮನಿಸಲಾಗಿದೆ. ಯಾವುದೇ ಆಧಾರಗಳಿಲ್ಲದೆ, ಹಿಂದೆ ವಿಂಗಡಣೆ ಮಾಡಲಾಗಿತ್ತು. ಸಮೀಕ್ಷೆಯಿಂದ ನಿಖರ ಮಾಹಿತಿ ಸಿಕ್ಕಿದೆ. 25 ವರ್ಷಗಳಿಂದ ಅನ್ಯಾಯಕ್ಕೆ ಒಳಗಾಗುತ್ತಲೆ ಬಂದ ಕೆಲವು ಜಾತಿಗಳಿಗೆ ಇದರಿಂದ ಅನು ಕೂಲ ಆಗಲಿದೆ. ಮಡಿವಾಳ, ಸವಿತಾ ಸಮಾಜ  ಸದ್ಯ 2 (ಎ)ಯಲ್ಲಿದ್ದು, ಹಿಂದುಳಿದ ಪಟ್ಟಿಯಲ್ಲಿವೆ. ಹೊಸ ವರ್ಗೀಕ ರಣದ ಬಳಿಕ ಈ ಜಾತಿಗಳೂ ಸೇರಿದಂತೆ, ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ’ ಎಂದೂ ಹೇಳಿವೆ. ‘ಈ ರೀತಿಯ ಮರುವಿಂಗಡಣೆಗೆ ವಿಷಯ ತಜ್ಞರಿಂದ ಅಭಿಪ್ರಾಯ ಪಡೆಯಲಾಗಿದೆ. ದಿನದಲ್ಲಿ 30 ಜಾತಿಗಳಂತೆ, ಗೌಪ್ಯ ಸ್ಥಳದಲ್ಲಿ ಈ ಮರುವಿಂಗಡಣೆ ಕಾರ್ಯ ನಡೆಸಲು ಆಯೋಗ ನಿರ್ಧರಿಸಿದೆ. ಈ ಉದ್ದೇಶದಿಂದ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ಗೆ ಮಾಹಿತಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ಕುರುಬ ಜಾತಿ ‘ಅತ್ಯಂತ ಹಿಂದುಳಿದ’ ವರ್ಗ
ಜಾತಿ ಮರು ವಿಂಗಡಣೆಯಲ್ಲಿ ಕುರುಬ ಜಾತಿ 156 ಅಂಕಗಳನ್ನು ಪಡೆದಿದೆ. 150ಕ್ಕಿಂತ ಹೆಚ್ಚು ಅಂಕ ಪಡೆದ ಜಾತಿ ‘ಅತ್ಯಂತ ಹಿಂದುಳಿದ’ ವರ್ಗಕ್ಕೆ
ಸೇರುತ್ತದೆ ಎಂದು ಮೂಲಗಳು ತಿಳಿಸಿವೆ.

‘ಕ್ರಿಶ್ಚಿಯನ್‌ ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅನೇಕರು ತಮ್ಮ ಮೂಲ ಜಾತಿಯನ್ನೇ ನಮೂದಿಸಿದ್ದಾರೆ. ಕ್ರೈಸ್ತರ ಜನಸಂಖ್ಯೆ ತೋರಿಕೆಗೆ ಹೆಚ್ಚು ಕಾಣಿಸಿದರೂ ದಾಖಲೆಯಲ್ಲಿ ಕಡಿಮೆ ಇದೆ’ ಎಂದು ಮೂಲಗಳು ಹೇಳಿವೆ.

ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ!
ಪ್ರತಿ ಜಾತಿಯ ಸರ್ಕಾರಿ ಉದ್ಯೋಗ ಮತ್ತು ರಾಜಕೀಯ ಪ್ರಾತಿನಿಧ್ಯ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಸುಮಾರು 150 ಜಾತಿಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಬೆಸ್ತ, ಉಪ್ಪಾರ, ಗೊಲ್ಲ ಜಾತಿಯವರಲ್ಲಿ ಉನ್ನತ ಉದ್ಯೋಗದಲ್ಲಿರುವವರು ತಲಾ ಒಬ್ಬರು ಮಾತ್ರ.
ಶಾಸನ ಸಭೆಯಲ್ಲಿ ಈ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ ಬೆಸ್ತ–2, ಉಪ್ಪಾರ ಮತ್ತು ಗೊಲ್ಲ ತಲಾ ಒಂದು. ಜನಸಂಖ್ಯೆ ಅನುಗುಣವಾಗಿ ಹಲವು ಜಾತಿಗಳಿಗೆ ಈ ಪ್ರಾತಿನಿಧ್ಯಗಳು ಸಿಕ್ಕಿಲ್ಲ ಎಂಬ ಅಂಶ ಸಮೀಕ್ಷೆಯಿಂದ ಸ್ಪಷ್ಟವಾ ಗಿದೆ. ಮೀಸಲಾತಿ ಬಲಪಡಿಸಲು ಈ ವರದಿ ವೇದಿಕೆಯಾಗಲಿದೆ ಎಂದೂ ಮೂಲಗಳು ಹೇಳಿವೆ.

ಅಂಕಿಅಂಶ

5.98 ಕೋಟಿ - ಸಮೀಕ್ಷೆಗೆ ಒಳಪಟ್ಟವರು

32 ಲಕ್ಷ -ಸಮೀಕ್ಷೆಯಿಂದ ಹೊರಗುಳಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT