ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

300 ದಕ್ಷಿಣ ಭಾರತೀಯರಿಂದ ಬೌದ್ಧ ಧಮ್ಮ ಸ್ವೀಕಾರ

ರಾಜ್ಯ ಬೌದ್ಧ ಯುವ ಸಮ್ಮೇಳನ
Published 14 ಅಕ್ಟೋಬರ್ 2023, 16:28 IST
Last Updated 14 ಅಕ್ಟೋಬರ್ 2023, 16:28 IST
ಅಕ್ಷರ ಗಾತ್ರ

ಬೆಂಗಳೂರು: ಸದಾಶಿವನಗರದ ನಾಗಸೇನಾ ಬುದ್ಧವಿಹಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಬೌದ್ಧ ಯುವ ಸಮ್ಮೇಳನ, 67ನೇ ಧಮ್ಮ ದೀಕ್ಷಾ ಸಮಾವೇಶದಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 300ಕ್ಕೂ ಹೆಚ್ಚು ವಿವಿಧ ಜಾತಿಗಳ ಜನರು ಬೌದ್ಧ ಧಮ್ಮ ಸ್ವೀಕರಿಸಿದರು. 

ಭಾರತೀಯ ಬುದ್ಧಿಸ್ಟ್‌ ಸಂಘ, ಕರ್ನಾಟಕ ಬುದ್ಧ ಸಮಾಜ, ಸಮತಾ ಸೈನಿಕ ದಳ, ದಲಿತ ಸಂಘರ್ಷ ಸಮಿತಿ ಹಾಗೂ ಸಮ್ಯಕ್‌ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದ್ದವು. 

ಕರ್ನಾಟಕ ತಮಿಳುನಾಡು, ಆಂಧ್ರಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಧಮ್ಮ ದೀಕ್ಷೆ ಪಡೆದ ಎಲ್ಲರಿಗೂ ನಾಗಪುರದ ಅಶೋಕ ಬೌದ್ಧ ವಿಹಾರದ ವಿನಯರಖ್ಖಿತ ಮಹಾಥೆರೋ ಅವರು ಅಂಬೇಡ್ಕರ್‌ ಅನುಸರಿಸಿದ್ದ 21 ಅಂಶಗಳನ್ನು ಬೋಧಿಸಿದರು. 

ಧಮ್ಮ ದೀಕ್ಷಾ ಸಮಾವೇಶ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಬೌದ್ಧ ಧಮ್ಮ ಶೋಷಿತ ಸಮುದಾಯಗಳ ವಿಮೋಚನಾ ಮಾರ್ಗವಾಗಿದೆ. 22 ವರ್ಷಗಳು ನಿರಂತರವಾಗಿ ಬೌದ್ಧ ಧಮ್ಮ ಕುರಿತು ಅಧ್ಯಯನ ಮಾಡಿದ್ದ ಬಿ.ಆರ್. ಅಂಬೇಡ್ಕರ್‌ ಅವರು ಕೊನೆಗೆ ಅದೇ ಧಮ್ಮ ಸ್ವೀಕರಿಸಿದರು. ಅಂದಿನಿಂದಲೂ ಶೋಷಿತರು ಹೆಚ್ಚಿನ ಸಂಖ್ಯೆಯಲ್ಲಿ ಅನುಸರಿಸುತ್ತಿದ್ದಾರೆ ಎಂದರು. 

ಬೀದರ್‌ನ ಅಣಬೂರು ಬುದ್ಧ ವಿಹಾರದ ದಮ್ಮಾನಂದ ಮಹಾಥೆರೋ, ಚಾಮರಾಜನಗರ ನಳಂದ ವಿಶ್ವವಿದ್ಯಾಲಯದ ಬೋಧಿದತ್ತ ಥೆರೋ, ನಾಗಸೇನಾ ಬುದ್ಧ ವಿಹಾರದ ಅಧ್ಯಕ್ಷ ಎಂ.ವೆಂಕಟಸ್ವಾಮಿ,  ಬಿಕ್ಕುಣಿ ಬುದ್ಧಮ್ಮ, ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ. ಮಹೇಶ್‌, ಬಿಎಸ್‌ಐ ಕರ್ನಾಟಕದ ಅಧ್ಯಕ್ಷ ಸಾಕೆ ಶಾಮು, ನಿವೃತ್ತ ಐಎಎಸ್‌ ಅಧಿಕಾರಿಗಳಾದ ಎಚ್‌.ಸಿದ್ದಯ್ಯ, ಬಾಬುರಾವ್ ಮುಡುಬಿ, ನಿವೃತ್ತ ಐಪಿಎಸ್‌ ಅಧಿಕಾರಿ ಸುಭಾಷ್‌ ಭರಣಿ ಉಪಸ್ಥಿತರಿದ್ದರು. 

ಸಮ್ಮೇಳನದ ನಿರ್ಣಯಗಳು

* ಕರ್ನಾಟಕದ ಬೌದ್ಧ ಧಮ್ಮದ ಅನುಯಾಯಿಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ. 

* ಬೌದ್ಧ ಧಮ್ಮ ಸ್ವೀಕರಿಸುವ ಪರಿಶಿಷ್ಟರಿಗೆ ಎಸ್‌ಸಿ ಎಸ್‌ಟಿ ಸೌಲಭ್ಯ ಪಡೆಯಲು ಅವಕಾಶ. 

* ಬುದ್ಧ ಪೂರ್ಣಿಮೆಗೆ ಸರ್ಕಾರಿ ರಜೆ ಘೋಷಣೆ. 

* ಬೌದ್ಧ ಗುರುಗಳಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT