ಬೆಂಗಳೂರು: ಲೋಕಸಭೆ ಚುನಾವಣೆ ವೇಳೆ ವಿವಿಧೆಡೆ ದಾಳಿ ನಡೆಸಿ ₹ 35 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಹಾಗೂ ಗೋವಾ ವೃತ್ತದ ಪ್ರಧಾನ ಮುಖ್ಯ ಕಮಿಷನರ್ ಬಿ.ಆರ್. ಬಾಲಕೃಷ್ಣನ್ ಬುಧವಾರ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಾಲಕೃಷ್ಣನ್, ಅಧಿಕಾರದಲ್ಲಿರುವ ಹಾಗೂ ಅಧಿಕಾರದಲ್ಲಿ ಇಲ್ಲದ ಪಕ್ಷಗಳ ಕೆಲವು ನಾಯಕರ ಹಣವೂ ಇದರಲ್ಲಿ ಸೇರಿದೆ. ಆದರೆ, ಅವರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
‘ಬೇನಾಮಿ ವ್ಯವಹಾರ (ನಿಷೇಧ) ತಿದ್ದುಪಡಿ ಕಾಯ್ದೆ’ಯಡಿ ₹ 573 ಕೋಟಿ ಮೊತ್ತದ ಅಕ್ರಮ ಆಸ್ತಿ ಜಪ್ತಿ ಮಾಡಲಾಗಿದೆ. ತೆರಿಗೆ ತಪ್ಪಿಸಿದ ₹ 7,500 ಕೋಟಿ ಮೊತ್ತದ ಆಸ್ತಿ ಪತ್ತೆಹಚ್ಚಿದ್ದು, ₹ 4800 ಮೌಲ್ಯದ ಆಸ್ತಿಗಳನ್ನು ಅವುಗಳ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದರು.