ಜಗಳೂರು (ದಾವಣಗೆರೆ ಜಿಲ್ಲೆ): ‘ವೀರಶೈವ, ಲಿಂಗಾಯತರು ಇಬ್ಬರನ್ನೂ ಅವರವರ ದೇವರೇ ಕಾಪಾಡಲಿ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಚಟಾಕಿ ಹಾರಿಸಿದರು.
ಸಿರಿಗೆರೆ ಮಠ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಬುಧವಾರ ಅವರು ಮಾತನಾಡಿದರು.
‘ನಾವು ವೀರಶೈವರು, ನಾವು ಲಿಂಗಾಯತರು ಎಂದು ಪ್ರತಿಪಾದಿಸುವ ರಾಶಿ ರಾಶಿ ದಾಖಲೆಗಳು ನನ್ನ ಬಳಿ ಇವೆ. ಆದರೆ, ಚರ್ಚೆಗೆ ಕೊನೆ ಮೊದಲಿಲ್ಲ. ಹಾಗಾಗಿ, ಅವರವರ ಧರ್ಮ ಅವರವರು ಅನುಸರಿಸಲಿ’ ಎಂದರು.
ಭಾರತ ರತ್ನಕ್ಕೆ ಶಿಫಾರಸು ಮಾಡಲಿ: ಜನರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಹೆಸರನ್ನು ರಾಜ್ಯ ಸರ್ಕಾರ ಭಾರತ ರತ್ನಕ್ಕೆ ಶಿಫಾರಸು ಮಾಡಬೇಕು ಎಂದು ಸಲಹೆ ನೀಡಿದರು.
‘ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸಮಾಜದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸರ್ಕಾರದಲ್ಲಿ ಹಿಂದಿನ ಸ್ವಾಮೀಜಿಯ ಮಾತು ನಡೆಯುತ್ತಿತ್ತು. ಸಿರಿಗೆರೆ ಸ್ವಾಮೀಜಿ ಕೂಡ ಸಮಾಜದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಜವಾಬ್ದಾರಿ ವಹಿಸಿಕೊಳ್ಳಲಿ’ ಎಂದು ಮನವಿ ಮಾಡಿದರು.
ಜನರಿಗೆ ಸಾಕಷ್ಟು ಭಾಗ್ಯಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದೆಯೂ ಮುಖ್ಯಮಂತ್ರಿಯಾಗಲು ಸ್ವಾಮೀಜಿ ಆರ್ಶಿವಾದ ಮಾಡಬೇಕು ಎಂದರು.