ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ ಪರಿಷ್ಕರಿಸಿರುವ ಸರ್ಕಾರ, ಶೇ 20ರಷ್ಟು ಹೆಚ್ಚಳ ಮಾಡಿ ಆದೇಶಿಸಿದೆ.
ಈ ಹಿಂದೆ ಪ್ರತಿ ಉತ್ತರ ಪತ್ರಿಕೆಗೆ ಇದ್ದ ₹ 25 ಅನ್ನು ₹ 30ಕ್ಕೆ, ದಿನಭತ್ಯೆಯನ್ನು ₹ 680ರಿಂದ ₹ 816ಕ್ಕೆ ಹೆಚ್ಚಿಸಲಾಗಿದೆ. ಪ್ರಯಾಣ ಭತ್ಯೆ ₹ 200ರಿಂದ ₹ 240ಕ್ಕೆ, ವಿಶೇಷ ಜಾಗೃತ ದಳದ ದಿನಭತ್ಯೆ ₹ 480 ರಿಂದ ₹ 576ಕ್ಕೆ ಏರಿಕೆ ಮಾಡಲಾಗಿದೆ.
ಪ್ರತಿ ವರ್ಷಕ್ಕೆ ಶೇ 10ರಂತೆ ಮೂರು ವರ್ಷಕ್ಕೊಮ್ಮೆ ಶೇ 30ರಷ್ಟು ಭತ್ಯೆ ಹೆಚ್ಚಳ ಮಾಡಲಾಗುತ್ತಿತ್ತು. ಈ ಹಿಂದೆ 2016ರಲ್ಲಿ ಹೆಚ್ಚಳವಾಗಿದ್ದು, ಎರಡು ವರ್ಷದ ಬಳಿಕ ಶೇ 20ರಷ್ಟು ಹೆಚ್ಚಿಸಲಾಗಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂಬುದು ಉಪನ್ಯಾಸಕರ ಅಭಿಪ್ರಾಯ.