ಮಡಿಕೇರಿ: ‘ರಾಜ್ಯದಲ್ಲಿ ಸದ್ಯಕ್ಕೆ ಡ್ರಗ್ಸ್ ಸೇವನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಡ್ರಗ್ಸ್ ಪೂರೈಕೆದಾರರು, ಮಧ್ಯವರ್ತಿಗಳು ಹಾಗೂ ಮಾರಾಟ ಜಾಲ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಇಲ್ಲಿ ಶನಿವಾರ ಹೇಳಿದರು.
‘ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರಕ್ಕಿಂತಲೂ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಕೋಲಾರ, ಬೆಳಗಾವಿ ಜಿಲ್ಲೆಯಲ್ಲಿ ಡ್ರಗ್ಸ್ ಸಂಬಂಧಿತವಾಗಿ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಹೇಳಿದರು.
‘ಸಿನಿಮಾ ಕ್ಷೇತ್ರದಲ್ಲಿ ಶೇ 2ರಿಂದ 3ರಷ್ಟು ಡ್ರಗ್ಸ್ ದಂಧೆ ಇರಬಹುದು. ಬೇರೆ ಕ್ಷೇತ್ರದಲ್ಲೂ ವ್ಯಾಪಕವಾಗಿದೆ. ಆದರೆ, ಮಾಧ್ಯಮಗಳಲ್ಲಿ ಸಿನಿಮಾ ಕ್ಷೇತ್ರದ ಬಗ್ಗೆ ಮಾತ್ರ ಹೆಚ್ಚು ಪ್ರಚಾರವಾಗುತ್ತಿದೆ. ಕೊಡಗಿನಲ್ಲಿರುವ ಹೋಮ್ ಸ್ಟೇ, ರೆಸಾರ್ಟ್ಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಡ್ರಗ್ಸ್ ಪೂರೈಕೆಯಂತಹ ಅಕ್ರಮಗಳು ನಡೆದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಕೋವಿಡ್ ನಿಯಂತ್ರಣದಲ್ಲಿ ರಾಜ್ಯದ ಪೊಲೀಸರೂ ಮುಂಚೂಣಿ ಪಾತ್ರ ವಹಿಸುತ್ತಿದ್ದಾರೆ. ಕಾರ್ಯ ನಿರ್ವಹಣೆ ವೇಳೆ 8 ಸಾವಿರ ಪೊಲೀಸರಿಗೆ ಕೊರೊನಾ ಸೋಂಕು ತಗುಲಿತ್ತು. 1,500 ಸಕ್ರಿಯ ಪ್ರಕರಣವಿದ್ದು, 73 ಪೊಲೀಸರು ಕೋವಿಡ್ನಿಂದ ಮೃತರಾಗಿದ್ದಾರೆ’ ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದರು.