ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್ಇಪಿ) ಹಲವು ವಿಷಯಗಳ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಲು ಸಿದ್ಧಪಡಿಸಿರುವ ವರದಿ ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ಎಐಡಿಎಸ್ಒ ದೂರಿದೆ.
ಸತ್ಯಕ್ಕೆ ದೂರವಾದ ಮತ್ತು ಐತಿಹಾಸಿಕ ಘಟನೆಗಳನ್ನು ತಿರುಚಿರುವ ಹಾಗೂ ಗೊಡ್ಡು ವಿಚಾರಗಳಿಂದ ಕೂಡಿರುವ ಈ ವರದಿಯನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಒತ್ತಾಯಿಸಿದ್ದಾರೆ.
ಎನ್ಇಪಿ ಪಠ್ಯಕ್ರಮದಲ್ಲಿ ಕೆಲವು ಅಂಶಗಳ ಸೇರ್ಪಡೆಗೆ ರಾಜ್ಯ ನಿಯೋಜಿಸಿದ 26 ಸದಸ್ಯರ ಸಮಿತಿಯು ತನ್ನ ಶಿಫಾರಸನ್ನು ಈಗ ಕೇಂದ್ರ ಸರ್ಕಾರಕ್ಕೆ ನೀಡಿದೆ. ಆದರೆ, ಶಾಲೆಗಳಲ್ಲಿ ಕಲಿಸುವ ಸ್ಥಾಪಿತ ವೈಜ್ಞಾನಿಕ ಅಂಶಗಳನ್ನು ಈ ಸಮಿತಿ ಅಲ್ಲಗೆಳೆದಿರುವುದು ಆಘಾತಕಾರಿಯಾಗಿದೆ ಎಂದು ತಿಳಿಸಿದ್ದಾರೆ.
'ಪೈಥಾಗರಸ್ ಪ್ರಮೇಯ' ಹಾಗೂ 'ಗುರುತ್ವಾಕರ್ಷಣೆ ಕುರಿತ ನ್ಯೂಟನ್ ಅವರ ಸೇಬಿನ ಘಟನೆಯನ್ನು 'ನಕಲಿ ಸುದ್ದಿ’ ಎಂದು ಈ ಸಮಿತಿಯು ಹೇಳಿದೆ. ಇಂತಹ ಹಲವಾರು ಅಂಶಗಳನ್ನು ಒಳಗೊಂಡಿರುವ ಸಮಿತಿಯ ಈ ವರದಿಯನ್ನು ರಾಜ್ಯ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶೈಕ್ಷಣಿಕ ರಂಗದಲ್ಲಿ ಕೇವಲ ಸ್ಥಾಪಿತ ಸತ್ಯ, ವೈಜ್ಞಾನಿಕ ಮನೋಭಾವ, ತಾರ್ಕಿಕ ಚಿಂತನೆ ಮತ್ತು ಭಾರತದ ನಿಜವಾದ ಇತಿಹಾಸವನ್ನು ಮಾತ್ರವೇ ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.