ಬೆಂಗಳೂರು: 1996ರಿಂದಲೂ ಕಮಲ ಪಡೆಯ ತೆಕ್ಕೆಯಲ್ಲಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ‘ಅನುಕಂಪದ ಅಲೆ’ಯ ನಿರೀಕ್ಷೆಯಲ್ಲಿದ್ದರೆ, ‘ಕೈ’ ಪಾಳಯಕ್ಕೆ ಅಭ್ಯರ್ಥಿಗಳ ಹುಡುಕಾಟವೇ ತಲೆನೋವಿನ ಕೆಲಸವಾಗಿದೆ.
ಕೇಂದ್ರ ಸಚಿವರಾಗಿದ್ದ ಎಚ್.ಎನ್. ಅನಂತಕುಮಾರ್ ಅವರು ಆರು ಸಲ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಪ್ರತಿ ಚುನಾವಣೆಯಲ್ಲಿ ಹೊಸ ಹೊಸ ‘ಪ್ರಯೋಗ’ ಮಾಡಿದರೂ ಕಾಂಗ್ರೆಸ್ಗೆ ಯಶಸ್ಸು ಸಿಕ್ಕಿಲ್ಲ. ಅನಂತಕುಮಾರ್ ನವೆಂಬರ್ನಲ್ಲಿ ನಿಧನರಾದರು. ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ. ತೇಜಸ್ವಿನಿ ಸ್ಪರ್ಧೆಗೆ ಇಬ್ಬರು ಶಾಸಕರ ವಿರೋಧ ಇದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ‘ಕೈ’ ಅಭ್ಯರ್ಥಿ ಕಣಕ್ಕೆ ಇಳಿಯುವುದು ನಿಶ್ಚಿತ.