ಬೆಂಗಳೂರು: ಬೆಂಗಳೂರು–ಬೆಳಗಾವಿ ಮಧ್ಯೆ ‘ವಂದೇ ಭಾರತ್’ ಇಂಟರ್ಸಿಟಿ ಸೆಮಿ ಹೈಸ್ಪೀಡ್ ರೈಲು ಇಂದು (ಮಂಗಳವಾರ) ಪ್ರಾಯೋಗಿಕ ಸಂಚಾರ ಆರಂಭಿಸಿದೆ.
ಈ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ (ಕೆಎಸ್ಆರ್) ಬೆಳಿಗ್ಗೆ 5.45ಕ್ಕೆ ಹೊರಟಿದೆ. ಹುಬ್ಬಳ್ಳಿಗೆ 10.50ಕ್ಕೆ ತಲುಪಲಿದೆ. ಅಲ್ಲಿಂದ 10.55ಕ್ಕೆ ಹೊರಟು 11.20ಕ್ಕೆ ಧಾರವಾಡ, ಮಧ್ಯಾಹ್ನ 1.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಮಧ್ಯಾಹ್ನ 2ಕ್ಕೆ ವಾಪಸ್ ಹೊರಡಲಿದೆ. ಸಂಜೆ 4.15ಕ್ಕೆ ಧಾರವಾಡ, 4.45ಕ್ಕೆ ಹುಬ್ಬಳ್ಳಿ, ರಾತ್ರಿ 10.10ಕ್ಕೆ ಬೆಂಗಳೂರು ತಲುಪಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಿಂದ ಹೊರಟ ರೈಲು 7 ಗಂಟೆ 45 ನಿಮಿಷದಲ್ಲಿ ಬೆಳಗಾವಿಗೆ ತಲುಪಲಿದೆ. ಬಳಿಕ ಅಲ್ಲಿಂದ ಹೊರಟ ರೈಲು ಬೆಂಗಳೂರಿಗೆ ತಲುಪಲು 8 ಗಂಟೆ 10 ನಿಮಿಷ ತೆಗೆದುಕೊಳ್ಳುತ್ತದೆ.
ಬೆಂಗಳೂರು–ಧಾರವಾಡ ನಡುವೆ ಇರುವ ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಿ ಈಚೆಗೆ ರೈಲ್ವೆ ಮಂಡಳಿ ಆದೇಶ ಹೊರಡಿಸಿತ್ತು.
‘ವಂದೇ ಭಾರತ್’ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದ್ದರಿಂದ ಮತ್ತು ವಿಸ್ತರಿಸಲು ಬೇಡಿಕೆ ಬಂದಿದ್ದರಿಂದ ದೇಶದ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ಗಳನ್ನು ವಿಸ್ತರಿಸಿ ರೈಲ್ವೆ ಬೋರ್ಡ್ ಆದೇಶ ಹೊರಡಿಸಿತ್ತು. ಅದರಲ್ಲಿ ಕರ್ನಾಟಕದ ಒಂದು ರೈಲು ಸೇರಿತ್ತು.
ಬೆಂಗಳೂರು– ಧಾರವಾಡ ಜೂನ್ನಲ್ಲಿ ‘ವಂದೇ ಭಾರತ್’ ಆರಂಭಿಸಲಾಗಿತ್ತು. ನಿತ್ಯ ಶೇ 93ರಿಂದ ಶೇ 96ರಷ್ಟು ಆಸನಗಳು ಭರ್ತಿಯಾಗುತ್ತಿದ್ದವು. ಬೆಳಗಾವಿಗೆ ವಿಸ್ತರಿಸಬೇಕು ಎಂಬ ಕೂಗು ಎದ್ದಿತ್ತು.