ದಾವಣಗೆರೆ: ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಿರುವ ಭಾರತ್ ಬಂದ್ಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಿಗ್ಗೆಯಿಂದಲೇ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಲವು ಆಟೊಗಳುಮಾತ್ರ ಸಂಚರಿಸುತ್ತಿದ್ದು, ಪ್ರಯಾಣಿಕರು ಸಂಚರಿಸಲು ಪರದಾಡುತ್ತಿದ್ದಾರೆ. ಹೋಟೆಲ್ಗಳನ್ನು ತೆರೆದಿಲ್ಲ. ಬೀದಿ ಬದಿಯಲ್ಲಿ ಹೂವು ಹಣ್ಣುಗಳನ್ನು ಮಾತ್ರ ಮಾರುತ್ತಿರುವುದು ಕಂಡು ಬಂತು.
ಚಾಮರಾಜನಗರದಲ್ಲಿ ಬಸ್ ಸಂಚಾರ ಇಲ್ಲ.
ಚಿಕ್ಕಮಗಳೂರು: ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. ಪ್ರಯಾಣಿಕರು, ಬಸ್ಸುಗಳು ಇಲ್ಲದೆ ಕೆಎಸ್ಆರ್ಟಿಸಿ ನಿಲ್ದಾಣ ಬಿಕೊ ಎನ್ನುತ್ತಿದೆ.
ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಎರಡು ಬಸ್ಗಳಿಗೆ ಕಲ್ಲು ತೂರಾಟ
ಬೆಂಗಳೂರಿನಿಂದ ಬರುತ್ತಿದ್ದ ಬಸ್ಸುಗಳಿಗೆ ಕಲ್ಲು ತೂರಾಟ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಉಳಿದಂತೆ ಸಿಟಿ ಬಸ್ ಗಳು ಓಡಾಡದೆ ಬಂದ್ ಬಹುತೇಕ ಯಶಸ್ವಿಯಾಗುವ ಲಕ್ಷಣ ಕಾಣಿಸಿದೆ. ಅಂಗಡಿಗಳು, ಹೋಟೆಲ್ ತೆರೆದಿದ್ದು,ಆಟೊಗಳು ಸಂಚರಿಸುತ್ತಿವೆ.
ಬೆಳಗಾವಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ಭಾರತ ಬಂದ್ ಗೆ ಬೆಳಗಾವಿಯಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸಾರಿಗೆ ಬಸ್ ಗಳು ರಸ್ತೆಗಿಳಿದಿಲ್ಲ. ಕೆಲವೇ ಕೆಲವು ಆಟೊರಿಕ್ಷಾಗಳು ಓಡಾಡುತ್ತಿವೆ.
ಬಳ್ಳಾರಿ: ರೈಲು ತಡೆದು ಪ್ರತಿಭಟಿಸಲು ಅವಕಾಶ ನಿರಾಕರಿಸಿದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾಂಗ್ರೆಸ್ ಮುಖಂಡರು. ಅನುಮತಿ ಪಡೆಯದೆ ನಿಲ್ದಾಣ ದ ಮುಂಭಾಗ ಟೈರು ಸುಟ್ಟು ಪ್ರತಿಭಟಿಸಿದ್ದೇ ತಪ್ಪು. ನಿಲ್ದಾಣದ ಒಳಕ್ಕೆ ನುಗ್ಗಿದರೆ ಪ್ರಕರಣ ದಾಖಲಿಸಲಾಗುವುದು ಎಂದು ರೈಲ್ವೆ ಪೊಲೀಸ್ ತಾರಾಬಾಯಿ ಎಚ್ಚರಿಕೆ ನೀಡಿದರು.
ಬಾಗಲಕೋಟೆ: ಭಾರತ ಬಂದ್ ಹಿನ್ನೆಲೆಯಲ್ಲಿ ಬಾಗಲಕೋಟೆ ವಿಭಾಗದ 638 ಕೆಎಸ್ಆರ್ಟಿಸಿಬಸ್ಗಳು ಮುಂಜಾನೆ 6 ಗಂಟೆಯಿಂದಲೇ ರಸ್ತೆಗೆ ಇಳಿದಿಲ್ಲ. ಪ್ರಯಾಣಿಕರು ಓಡಾಟಕ್ಕೆ ಟಂಟಂಗಳನ್ನು ಆಶ್ರಯಿಸಿದ್ದಾರೆ.
ಜೈ ಹಿಂದ್ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಚಿತ್ರದುರ್ಗ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಾಕಿ ಪ್ರತಿಭಟಿಸಲು ಮುಂದಾದ ಜೈ ಹಿಂದ್ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಬೆಂಕಿ ಹಾಕಿ ವಾಹನ ಸಂಚಾರ ತಡೆಯಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು ತಕ್ಷಣ ಬೆಂಕಿ ನಂದಿಸಿದರು. ಬಳಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಕಾರವಾರ: ಬಂದ್ ಕರೆಯ ಕಾರಣ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬಹುಪಾಲು ಹೋಟೆಲ್ಗಳು ಮುಚ್ಚಿವೆ. ಆಟೊ ರಿಕ್ಷಾಗಳೂ ಸೇರಿದಂತೆ ನಗರದಲ್ಲಿ ವಾಹನಗಳ ಓಡಾಟ ಕಡಿಮೆಯಿದೆ.
***
ರಾಮನಗರ: ಬಂದ್ ಕರೆಗೆ ನಗರದಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ.
ಅಂಗಡಿ-ಮುಂಗಟ್ಟುಗಳು ಹೋಟೆಲ್ ಗಳು ಮುಚ್ಚಿವೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಆಟೊ, ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇದೆ.
ಪ್ರತಿಭಟನೆ: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಖಂಡಿಸಿ ಕುಮಾರಣ್ಣ ಅಭಿಮಾನಿ ಬಳಗದ ಸದಸ್ಯರು ನಗರದ ಐಜೂರು ವೃತ್ತದಲ್ಲಿ ಸಿಲಿಂಡರ್ಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.