ಹೊಸಪೇಟೆ (ವಿಜಯನಗರ)/ಹುಬ್ಬಳ್ಳಿ: ‘ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿಯೂ ನಡೆದಿದೆ. ಒಂದು ವಾಟ್ಸ್ ಆ್ಯಪ್ ಸಂದೇಶ ಆಧರಿಸಿ ಇಷ್ಟು ಗೊಂದಲ ಉಂಟುಮಾಡುವುದು ಸರಿಯಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿಳಿಸಿದರು.
ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ನಡೆದ ಗಲಭೆಯನ್ನು ಉಲ್ಲೇಖಿಸಿ ಈ ಮಾತು ಹೇಳಿದರು. ‘ಮತಾಂಧ ಶಕ್ತಿಗಳ ವಿರುದ್ಧ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ‘ಸಣ್ಣ ವಿಚಾರಗಳಿಗೆ ಯಾಕೆ ಕೆರಳುತ್ತಾರೆ? ಅವರು ಮಾತ್ರ ಉಪ್ಪು, ಹುಳಿ, ಖಾರ ತಿಂತಾರಾ? ಅದನ್ನೇ ಇಟ್ಟುಕೊಂಡು ಗಲಾಟೆ ಮಾಡಲು ಕಾಯ್ತಾ ಇರ್ತಾರಾ ಅಂತ ಅನಿಸುತ್ತೆ’ ಎಂದುಪ್ರತಿಕ್ರಿಯಿಸಿದರು.
‘ಈ ಹಿಂದೆ ನಡೆದ ಘಟನೆ ಕೂಡಾ ಸ್ಟೇಟಸ್ ಕಾರಣದಿಂದ. ಇದು ಈ ನೆಲದ ಕಾನೂನಿಗೆ ಬೆಲೆ ಕೊಡೋ ಮಾನಸಿಕತೆನಾ? ಸೆಕ್ಯುಲರ್ಗಳು ಏಕೆ ಈಗ ಮಾತನಾಡುವುದಿಲ್ಲ’ ಎಂದು ಖಾರವಾಗಿ ಪ್ರಶ್ನಿಸಿದರು.
ಪೊಲೀಸರು ನಿಯಂತ್ರಸಬೇಕು: ಶಾಸಕಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, ‘ಶಾಂತಿ ಕದಡುವ ಕೆಲಸ ನಡೆದಿರುವುದು ದುರದೃಷ್ಟಕರ. ಪ್ರಕರಣದಲ್ಲಿ ಆರೋಪಿಗಳು ಯಾರೇ ಇರಲಿ ತನಿಖೆ ಮಾಡಿ ಬಂಧಿಸಬೇಕು’ ಎಂದರು.
‘ಕೋಮುವಾದ ನಿಯಂತ್ರಿಸುವ ಕೆಲಸ ಪೊಲೀಸರು ಮಾಡಬೇಕು. ಶಾಂತಿ-ಸುವ್ಯವಸ್ಥೆ ತರುವ ಕೆಲಸವನ್ನು ನಮ್ಮ ಸರ್ಕಾರ ಖಂಡಿತ ಮಾಡಲಿದೆ’ ಎಂದರು.
ಕಾಂಗ್ರೆಸ್ ಪ್ರತಿಭಟಿಸುವುದಿಲ್ಲವೇ?: ಶಾಸಕ ಜಗದೀಶ ಶೆಟ್ಟರ್ ಅವರು, ‘ಈ ಹಿಂದೆ ಧಾರವಾಡದಲ್ಲಿ ಕಲ್ಲಂಗಡಿ ಅಂಗಡಿ ಹಾಳುಗೆಡವಿದರು ಎಂದು ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದ್ದರು.ಈಗ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡುವುದಿಲ್ಲವೇ? ವೋಟ್ ಬ್ಯಾಂಕ್ ರಾಜಕೀಯ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದ ಆರೋಪಿಯ ಬಂಧನ ಬಳಿಕವೂ ಕಾನೂನು ಕೈಗೆತ್ತಿಕೊಳ್ಳುವುದು ಅಕ್ಷಮ್ಯ ಅಪರಾಧ. ಗೂಂಡಾಗಿರಿಯನ್ನೂ ಯಾವುದೇ ಕಾರಣಕ್ಕೂ ಸಹಿಸಲ್ಲ. ಪ್ರಾರ್ಥನೆಗೆ ಸೇರಿದವರನ್ನು ಕರೆತಂದಿದ್ದಾರೆ ಎಂಬ ಆರೋಪ ಇದೆ. ಅವರೆಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
*
ಮುಸ್ಲಿಂ ಗೂಂಡಾಗಳಿಂದ ಠಾಣೆ, ಆಸ್ಪತ್ರೆ ಮೇಲೆ ದಾಳಿಯಾಗಿದೆ. ಸರ್ಕಾರ ತಕ್ಷಣವೇ ಇವರನ್ನು ಗೂಂಡಾ ಕಾಯ್ದೆ, ಭಯೋತ್ಪಾದಕ ಕಾಯ್ದೆ ಅಡಿ ಬಂಧಿಸಬೇಕು.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
*
ಕೆ.ಜೆ.ಹಳ್ಳಿ, ಡಿ.ಜೆ. ಹಳ್ಳಿ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡದ್ದೇ ಈ ಘಟನೆಗೆ ಕಾರಣ. ಅವರನ್ನು ಮುಗಿಸಲು ಕಠಿಣ ಕ್ರಮ ಕೈಗೊಳ್ಳಬೇಕು.
-ಬಸನಗೌಡ ಪಾಟೀಲ ಯತ್ನಾಳ್, ಶಾಸಕ
*
ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳು ಶೂನ್ಯವಾಗಿವೆ. ಇದನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಜ್ಯ ಸರ್ಕಾರವೇ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದೆ.
-ಭಾಸ್ಕರ್ ರಾವ್, ಎಎಪಿ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.