ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೋಲಿಗೆ ಕಾರಣ: ಪರಸ್ಪರ ದೂಷಣೆ

ಆತ್ಮಾವಲೋಕನ ಸಭೆಯಲ್ಲಿ ದೂಷಿಸಿಕೊಂಡ ಬಿಎಸ್‌ವೈ– ಬಿಎಲ್‌ಎಸ್‌ ಬಣ
Published 9 ಜೂನ್ 2023, 2:23 IST
Last Updated 9 ಜೂನ್ 2023, 2:23 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಸೋಲಿನ ಹೊಣೆ ಹೊರುವ ವಿಚಾರದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಬಣ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬಣದ ಶಾಸಕರು, ಮುಖಂಡರು ಆತ್ಮಾವಲೋಕನ ಸಭೆಯಲ್ಲೇ ಪರಸ್ಪರ ದೂಷಿಸಿಕೊಂಡಿದ್ದಾರೆ.

ಸೋಲಿನ ಕುರಿತು ಪರಾಮರ್ಶೆ ನಡೆಸುವುದಕ್ಕಾಗಿ ಪಕ್ಷದ ರಾಜ್ಯ ಘಟಕದ ಕಚೇರಿಯಲ್ಲಿ ಗುರುವಾರ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಜತೆ ಎರಡು ಪ್ರತ್ಯೇಕ ಸಭೆಗಳನ್ನು ನಡೆಯಿತು. ‘ಎರಡೂ ಸಭೆಗಳಲ್ಲಿ ಯಡಿಯೂರಪ್ಪ ಮತ್ತು ಸಂತೋಷ್‌ ಬಣದವರು ಸೋಲಿನ ಹೊಣೆಯನ್ನು ಪರಸ್ಪರ ವಿರೋಧಿಗಳ ಮೇಲೆ ಹೊರಿಸಲು ಪ್ರಯತ್ನಿಸಿದರು’ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಡಿ.ವಿ. ಸದಾನಂದ ಗೌಡ, ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿದ್ದರು.

ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ಹಿರಿಯ ಶಾಸಕರನ್ನು ಕಡೆಗಣಿಸಿದ್ದು ಸೋಲಿಗೆ ಪ್ರಮುಖ ಕಾರಣ ಎಂಬರ್ಥ ದಲ್ಲಿ ಯಡಿಯೂರಪ್ಪ ಬಣದ ಕೆಲವರು ಮಾತನಾಡಿದ್ದಾರೆ. ಈ
ವಾದವನ್ನು ಒಪ್ಪಿಕೊಳ್ಳದ ಸಂತೋಷ್‌ ಬಣದವರು, ಹೊಸಬರನ್ನು ಕಣಕ್ಕಿಳಿಸದೇ ಇದ್ದರೆ ಬಿಜೆಪಿ ಶಾಸಕರ ಸಂಖ್ಯೆ ಇನ್ನೂ ಕುಸಿಯುತ್ತಿತ್ತು ಎಂಬುದಾಗಿ ಪ್ರತಿವಾದ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವ ನಿರ್ಧಾರದಿಂದ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ಸಭೆಗಳಲ್ಲಿ ವ್ಯಕ್ತವಾಗಿದೆ.

‘ಒಳಮೀಸಲಾತಿ, ಗ್ಯಾರಂಟಿಗಳೇ ಪೆಟ್ಟು’

‘ಒಳ ಮೀಸಲಾತಿಯ ಪೆಟ್ಟು, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗಳನ್ನು ನಂಬಿ ಜನರು ಮತ ಚಲಾಯಿಸಿರುವುದು ಮತ್ತು ಸರ್ಕಾರದ ವಿರುದ್ಧ ನಡೆದ ನಕಾರಾತ್ಮಕ ಪ್ರಚಾರ ನಮ್ಮ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು. ‘ಸರ್ಕಾರದ ಒಳ್ಳೆಯ ಕಾರ್ಯಕ್ಕೆ ಸಹಕಾರ, ಜನವಿರೋಧಿ ಕಾರ್ಯ ಮುಂದುವರಿಸಿದಾಗ ಹಾಗೂ ರಹಸ್ಯ ಕಾರ್ಯಸೂಚಿಯ ಭಾಗವಾಗಿ ರಾಜ್ಯಕ್ಕೆ ಘಾತುಕವಾಗುವ ನಿರ್ಣಯ ಕೈಗೊಂಡರೆ ಹೋರಾಡಲು ನಿರ್ಧರಿಸಲಾಗಿದೆ’ ಎಂದರು.

ಸುಧಾಕರ್‌ ವಿರುದ್ಧ ಎಂಟಿಬಿ ಗರಂ

‘ಯಡಿಯೂರಪ್ಪ ಅವರ ಮಾತಿಗೆ ಗೌರವ ಕೊಟ್ಟು ಬಿಜೆಪಿಗೆ ಬಂದೆ. ಇಲ್ಲಿ ಎರಡು ಚುನಾವಣೆಯಲ್ಲಿ ಸೋಲಬೇಕಾಯಿತು. ಈ ಬಾರಿ ನನ್ನ ಸೋಲಿಗೆ ಹಿಂದಿನ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ನೇರ ಕಾರಣ’ ಎಂಬುದಾಗಿ ವಿಧಾನ ಪರಿಷತ್‌ ಸದಸ್ಯ ಎಂ.ಟಿ.ಬಿ. ನಾಗರಾಜ್‌ ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುಧಾಕರ್‌ ಇದ್ದರು. ಅವರು ಮಾಡಿದ ತಪ್ಪುಗಳಿಂದ ನಾವು ಸೋತೆವು. ನನ್ನ ಮತ್ತು ಚಿಂತಾಮಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಆತನೇ ಕಾರಣ ಎಂದು ಹರಿಹಾಯ್ದಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT