ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನ, 19 ಶಾಸಕರ ಪಕ್ಷಾಂತರ ಪರ್ವ, ಉಪಚುನಾವಣೆ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ರಚನೆಯಲ್ಲಿ ವಿಜಯೇಂದ್ರ ಅವರೂ ತೆರೆಮರೆಯಲ್ಲಿ ಪಾತ್ರ ವಹಿಸಿದ್ದು ಗುಟ್ಟಾಗೇನೂ ಉಳಿದಿರಲಿಲ್ಲ.
ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದಿದ ನಂತರ ನಡೆದ ಬೆಳವಣಿಗೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಗೆದ್ದು ಬಂದಿದ್ದ ವಿಜಯೇಂದ್ರ, ಈಗ ರಾಜ್ಯ ಬಿಜೆಪಿಯ ಸಂಕಷ್ಟ ಕಾಲದಲ್ಲಿ ಸಂಘಟನೆಯ ಹೊಣೆ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಉತ್ತಮ ಸಂಘಟಕ, ರಾಜಕೀಯ ತಂತ್ರಗಾರ ಎಂಬ ಶ್ರೇಯದೊಂದಿಗೆ ವೀರಶೈವ-ಲಿಂಗಾಯತ ಸಮುದಾಯದಲ್ಲೂ ಪ್ರಭಾವಿ ಆಗಿರುವುದರಿಂದ ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಮಹತ್ವದ ಜವಾಬ್ದಾರಿ ದೊರೆತಿದೆ. ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಪುತ್ರನಿಗೆ ಪಟ್ಟ ಕೊಡಿಸಿ ಪಕ್ಷದಲ್ಲಿ ಯಡಿಯೂರಪ್ಪ ಮತ್ತೆ ಹಿಡಿತ ಸಾಧಿಸಿದ್ದಾರೆ ಎಂಬ ವಿಶ್ಲೇಷಣೆ ಸ್ಥಳೀಯವಾಗಿ ನಡೆಯುತ್ತಿದೆ.
ವಿಶೇಷವೆಂದರೆ ಶಿಕಾರಿಪುರ ಪ್ರತಿನಿಧಿಸುವ ಶಾಸಕರು ಎರಡನೇ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಪಡೆದಿದ್ದಾರೆ. ಅಪ್ಪ ಬಿ.ಎಸ್.ಯಡಿಯೂರಪ್ಪ ನಂತರ ರಾಜ್ಯಾಧ್ಯಕ್ಷ ಸ್ಥಾನ ಈಗ ವಿಜಯೇಂದ್ರಗೆ ಒಲಿದಿದೆ.