ಚಿಕ್ಕಮಗಳೂರು: ವಾಂತಿಭೇದಿಯಿಂದ ಅಸ್ವಸ್ಥರಾಗಿ ಗುರುವಾರ ಬೆಂಗಳೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದ ಮಹಿಳೆಯ (62) ಗಂಟಲಿನ ದ್ರವ ಪರೀಕ್ಷೆಯ ವರದಿ ಬಂದಿದ್ದು, ಕೊರೊನಾ ವೈರಸ್ ಸೋಂಕು ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾದಿಂದ ಇದೇ 1ರಂದು ಈ ಮಹಿಳೆ ಬಂದಿದ್ದರು. ವಾಂತಿಭೇದಿಯಿಂದ ಅಸ್ವಸ್ಥರಾಗಿ ಗುರುವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು.
ಉಸಿರಾಟದ ಸಮಸ್ಯೆಯೂ ಕಂಡುಬಂದಿದ್ದರಿಂದ ಗಂಟಲಿನ ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಬೆಂಗಳೂರಿಗೆ ಒಯ್ಯುವಾಗ ಮೃತಪಟ್ಟಿದ್ದರು. ಕೊರೊನಾ ನಿಗಾ ಪಟ್ಟಿಯಲ್ಲಿ ಮಹಿಳೆ ಹೆಸರು ಇರಲಿಲ್ಲ. ಮಹಿಳೆಗೆ ಮಧುಮೇಹ ತೀವ್ರ ಇತ್ತು ಎಂದು ವೈದ್ಯರು ತಿಳಿಸಿದ್ದರು.