ವಿಶ್ವದ ವಕೀಲ ಸಮುದಾಯ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಅದರಿಂದ ಸೃಷ್ಟಿಯಾಗುವ ಅಸಮಾನತೆ ತೊಡೆದು ಹಾಕಲು ಶ್ರಮಿಸಬೇಕು ಎಂದು ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷೆ ಸೌಮ್ಯ ಸ್ವಾಮಿನಾಥನ್ ಸಲಹೆ ನೀಡಿದರು.
ಕೋವಿಡ್ನಂತಹ ಸಾಂಕ್ರಾಮಿಕ ರೋಗಗಳಿಗಿಂತ ಹವಾಮಾನ ಬದಲಾವಣೆ ಪ್ರಮುಖ ಸವಾಲಾಗಿದೆ. ಹವಾಮಾನ ಬದಲಾವಣೆ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಒಂದಕ್ಕೊಂದು ಸಮಸ್ಯೆಗಳು ಬೆಸೆದುಕೊಳ್ಳುತ್ತವೆ. ಇಂತಹ ಸ್ಥಿತಿಯಲ್ಲಿ ಅತಿ ಹೆಚ್ಚು ಸಮಸ್ಯೆ ಎದುರಿಸುವುದು ದುರ್ಬಲ ವರ್ಗಗಳು. ಹಾಗಾಗಿ, ಹವಾಮಾನ ವೈಪರೀತ್ಯ ಹಾಗೂ ದುರ್ಬಲ ಸಮುದಾಯಗಳ ಸಂರಕ್ಷಣೆಗೆ ವಕೀಲರು ನ್ಯಾಯ ಮತ್ತು ಸಮಾನತೆಯ ಅಸ್ತ್ರ ಬಳಸಬೇಕು ಎಂದರು.
ಸಾಂಕ್ರಾಮಿಕ ರೋಗದ ಸಮಯದಲ್ಲಿ ಲಸಿಕೆ ಹಾಕುವಲ್ಲೂ ಶ್ರೀಮಂತ ಮತ್ತು ಬಡ ದೇಶಗಳ ಮಧ್ಯೆ ತಾರತಮ್ಯ ಎದ್ದುಕಾಣುತ್ತಿತ್ತು. ಹವಾಮಾನ ಬದಲಾವಣೆಯು ರಚನೆ, ವ್ಯವಸ್ಥೆಗಳು ನಮ್ಮ ಆರ್ಥಿಕತೆಯ ಮೇಲೂ ಪರಿಣಾಮ ಬೀರುವುದರಿಂದ ಇಂತಹ ವ್ಯತ್ಯಾಸಗಳು ಸಹಜವಾಗಿವೆ. ಇಂತಹ ಸಂಕಟಗಳನ್ನು ಶಮನ ಮಾಡಲು ಭೂಮಿಯ ಉಷ್ಣತೆ ಸಹಜ ಸ್ಥಿತಿಗೆ ತರಲು ಎಲ್ಲರೂ ಶ್ರಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.