ಕಲಬುರ್ಗಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕಾಗಿ ಹೇರೂರ (ಬಿ) ಗ್ರಾಮಕ್ಕೆ ತೆರಳುವ 21 ಕಿ.ಮೀ. ರಸ್ತೆಯನ್ನು ಅಗೆದಿದ್ದು, ಮಣ್ಣು–ಜಲ್ಲಿ ಹಾಕಿ ಸಮತಟ್ಟು ಮಾಡುವ ಕಾರ್ಯವನ್ನು ಹಗಲು–ರಾತ್ರಿ ಮಾಡಲಾಗುತ್ತಿದೆ.
ಫರಹತಾಬಾದ್ದಿಂದ ಹೇರೂರ (ಬಿ) ಗ್ರಾಮದವರೆಗೆ ಟಾರ್ ರಸ್ತೆ ಇತ್ತು. ಅದು ಸಂಪೂರ್ಣ ಹದಗೆಟ್ಟಿತ್ತು. ಜೂನ್ 22ರಂದು ಗ್ರಾಮವಾಸ್ತವ್ಯಕ್ಕೆ ಇಲ್ಲಿಗೆ ತೆರಳುವ ಮುಖ್ಯಮಂತ್ರಿಯನ್ನು ಸುತ್ತಿಬಳಸಿ ಕರೆದುಕೊಂಡು ಹೋಗುವ ಪ್ರಯತ್ನವೂ ನಡೆದಿತ್ತು. ಕೊನೆ ಕ್ಷಣದಲ್ಲಿ ಅದನ್ನು ಕೈಬಿಟ್ಟ ಜಿಲ್ಲಾ ಆಡಳಿತ,ಈ ರಸ್ತೆಯನ್ನೇ ರಿಪೇರಿ ಮಾಡುತ್ತಿದೆ.
ಫರಹತಾಬಾದ್ನಿಂದ ಕವಲಗಾ ವರೆಗಿನ 6 ಕಿ.ಮೀ. ರಸ್ತೆಯಲ್ಲಿಯ ಗುಂಡಿಗಳನ್ನು ಮುಚ್ಚಲಾಗಿದೆ. ಅಲ್ಲಿಂದ ಹೇರೂರ ವರೆಗಿನ 21 ಕಿ.ಮೀ. ರಸ್ತೆಯನ್ನು ಅಗೆದಿದ್ದು, ಮಣ್ಣು–ಜಲ್ಲಿ ಹಾಕಿ ಸಮತಟ್ಟು ಮಾಡಲಾಗುತ್ತಿದೆ.ಈ ಮಾರ್ಗದಲ್ಲಿ 15 ಗ್ರಾಮಗಳಿದ್ದು, ಯಾವ ಊರಿಗೂ ಉತ್ತಮ ರಸ್ತೆ ಇಲ್ಲ.
ಮುಖ್ಯಮಂತ್ರಿ ಸ್ವಾಗತಕ್ಕೆ ಹೇರೂರ (ಬಿ) ಗ್ರಾಮ ಸಜ್ಜುಗೊಂಡಿದೆ. ಕುಮಾರಸ್ವಾಮಿ ಮಲಗುವ ಶಾಲೆಯನ್ನು ತಳಿರು– ತೋರಣಗಳಿಂದ ಅಲಂಕರಿಸಲಾಗಿದೆ. ಜನತಾ ದರ್ಶನದಲ್ಲಿ 15 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಶಾಮಿಯಾನದಲ್ಲಿ 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ.