ನವದೆಹಲಿ: ಕೇಂದ್ರದ ವಿವಿಧ ಸಚಿವರನ್ನು ಮಂಗಳವಾರ ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಕೇಂದ್ರ ಜವಳಿ ಸಚಿವ ಪೀಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿದ ಅವರು, ‘ಕಲಬುರಗಿ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ಮಿತ್ರಾ ಯೋಜನೆಯಡಿ ಸಹಾಯಾನುದಾನ ಪಡೆದು ವಿಶ್ವಮಟ್ಟದ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ’ ಎಂದು ಗಮನಕ್ಕೆ ತಂದರು.
‘ಈ ಮೂರು ಜಿಲ್ಲೆಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ ಸಮೀಪದಲ್ಲಿದ್ದು, ಎಲ್ಲ ಪ್ರಮುಖ ನಗರಗಳಿಗೆ ಹಾಗೂ ಬಂದರುಗಳಿಗೆ ಕೂಡ ಸಂಪರ್ಕವಿದೆ. ಈ ಜಿಲ್ಲೆಗಳಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಜವಳಿ ಕೇಂದ್ರವಾಗಿ ಜಿಲ್ಲೆಗಳನ್ನು ಪರಿವರ್ತಿಸಲು ಸಾಧ್ಯವಾಗಲಿದೆ. ಪ್ರಧಾನಮಂತ್ರಿಗಳ ಕನಸಿನಂತೆ ಜವಳಿ ಕೇತ್ರದಲ್ಲಿ ದೇಶ ಆತ್ಮನಿರ್ಭರ್ ಆಗಲು ಕೂಡಸಹಕಾರಿಯಾಗಲಿದೆ. ಕೇಂದ್ರ ಸರ್ಕಾರದ ಮಿತ್ರಾ ಯೋಜನೆಯಡಿ ಈ ಮೂರು ಜಿಲ್ಲೆಗಳನ್ನು ಸೇರ್ಪಡೆಗೊಳಿಸಬೇಕು’ ಎಂದು ಅವರು ಮನವಿ ಮಾಡಿದರು.
2 ಲಕ್ಷ ಟನ್ ಅಕ್ಕಿ ಬಿಡುಗಡೆಗೆ ಮನವಿ: ರಾಜ್ಯಕ್ಕೆ ಹತ್ತು ಸಾವಿರ ಟನ್ಗಳ ಅಕ್ಕಿ ಸರಬರಾಜನ್ನು ಸೀಮಿತಗೊಳಿಸಿರುವ ನೀತಿಯನ್ನು ಮರು ಪರಿಶೀಲಸುವಂತೆ ಬೊಮ್ಮಾಯಿ ಮನವಿ ಸಲ್ಲಿಸಿದರು.
ಭಾರತೀಯ ಆಹಾರ ನಿಗಮದ ವತಿಯಿಂದ 2023ರ ಮಾರ್ಚ್ ವರೆಗೆ ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ 2 ಲಕ್ಷ ಟನ್ ಅಕ್ಕಿಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಬಿಡುಗಡೆ ಮಾಡುವಂತೆ ಹಾಗೂ ತಕ್ಷಣವೇ 50 ಸಾವಿರ ಟನ್ ಅಕ್ಕಿಯನ್ನು ಬಿಡುಗಡೆ ಮಾಡುವಂತೆಯೂ ಕೋರಿದರು.