ಬೆಂಗಳೂರು: ರಾಜ್ಯ ಸರ್ಕಾರವು ಆರು ತಿಂಗಳಿನಿಂದ ಈಚೆಗೆ ಮಾಡಿರುವ ಭೂ ಮಂಜೂರಾತಿ ಪ್ರಕರಣಗಳ ಕುರಿತು ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಯಾವ ಸಂಘ, ಸಂಸ್ಥೆಗಳಿಗೆ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು. ಅನರ್ಹರಿಗೆ ಜಮೀನು ಮಂಜೂರು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು' ಎಂದರು.
ಯಾವುದೇ ಧರ್ಮಕ್ಕೆ ಸೇರಿರಲಿ, ಯಾವುದೇ ಸಂಘ, ಸಂಸ್ಥೆಯಾಗಿದ್ದರೂ ಅರ್ಹತೆ ಒಂದೇ ಮಾನದಂಡ. ನಿಯಮ ಉಲ್ಲಂಘನೆ, ಅರ್ಹತೆ ಇಲ್ಲದೆ ಜಮೀನು ಮಂಜೂರು ಮಾಡಿದ್ದರೆ ಸಂಪುಟ ಸಭೆಯ ಮುಂದೆ ಪ್ರಕರಣ ಮಂಡಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಹಿಂದಿನ ಸರ್ಕಾರ ಕೈಗೊಂಡ ಎಲ್ಲ ತೀರ್ಮಾನಗಳನ್ನೂ ಪರಿಶೀಲಿಸಲು ಆಗುವುದಿಲ್ಲ. ಆ ರೀತಿ ನಿರ್ಧರಿಸಿದರೆ ಬೇರೆ ಯಾವ ಕೆಲಸ ಮಾಡುವುದಕ್ಕೂ ಆಗುವುದಿಲ್ಲ. ಚುನಾವಣೆಯ ಸಮೀಪದಲ್ಲಿ ತರಾತುರಿಯಲ್ಲಿ ಕೈಗೊಂಡ ತೀರ್ಮಾನಗಳನ್ನಷ್ಟೇ ಪರಿಶೀಲಿಸಲಾಗುವುದು ಎಂದು ಹೇಳಿದರು