ಬೆಂಗಳೂರು: ರಾಕೇಶ್ ಸಿದ್ದರಾಮಯ್ಯ ತಪ್ಪು ಮಾಡಿ ವಿದೇಶಕ್ಕೆ ಹೋಗಿರಲಿಲ್ಲ. ರಾಕೇಶ್ ಪ್ರಕರಣವನ್ನು ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಹೋಲಿಸಬೇಡಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ʼರಾಕೇಶ್ ಸಾವಿನ ಬಗ್ಗೆಯೂ ತನಿಖೆ ನಡೆಸುತ್ತೀರಾʼ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ʼಪ್ರಜ್ವಲ್ ಅವರಂತೆ 200-300 ಮಹಿಳೆಯರ ಭವಿಷ್ಯ ಹಾಳು ಮಾಡಿ ವಿದೇಶಕ್ಕೆ ಹೋಗಿರಲಿಲ್ಲ. ರಾಕೇಶ್ ಮತ್ತು ಸ್ನೇಹಿತರು ಕಾನೂನಿನ ಪ್ರಕಾರ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಪದೇ ಪದೇ ರಾಕೇಶ್ ಸಾವಿನ ಪ್ರಕರಣ ಪ್ರಸ್ತಾಪಿಸುವುದು ಸರಿಯಲ್ಲʼ ಎಂದರು.
ನಿಮ್ಮ ಮನೆ ಮಗ ಎಲ್ಲಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಮೊದಲು ಅದಕ್ಕೆ ಉತ್ತರ ಕೊಡಿ. ಬೇರೆಯವರ ಮನೆ ಮಕ್ಕಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ರಾಕೇಶ್ ಪ್ರಕರಣವನ್ನು ಪ್ರಸ್ತಾಪಿಸುವುದನ್ನು ನಿಲ್ಲಿಸಿ. ಟಿಕೆಟ್ ಕೊಡುವಾಗ, ಮತ ಕೇಳುವಾಗ ಗೊತ್ತಿರಲಿಲ್ಲವೆ? ವದಂತಿಗಳು ಹರಿದಾಡುತ್ತಿದ್ದರೂ ಟಿಕೆಟ್ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.
ಗಂಭೀರವಾಗಿ ಕ್ರಮ ಜರುಗಿಸಿಲ್ಲ: ʼಪ್ರಜ್ವಲ್ ರೇವಣ್ಣ ಹೊಂದಿರುವ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದತಿಗೆ ಆಗ್ರಹಿಸಿ ಮುಖ್ಯಮಂತ್ರಿ ಬರೆದಿರುವ ಪತ್ರ ಮೇ 21ಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಪ್ರಧಾನಿಯವರ ಸಚಿವಾಲಯವು ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಜರುಗಿಸಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆʼ ಎಂದರು.
ಚುನಾವಣೆ ಫಲಿತಾಂಶಕ್ಕೂ ಮುನ್ನ ಪ್ರಜ್ವಲ್ ದೇಶಕ್ಕೆ ವಾಪಸ್ಸಾದರೆ ಮುಜುಗರ ಆಗುತ್ತದೆ ಎಂದು ಬಿಜೆಪಿ, ಜೆಡಿಎಸ್ನವರೇ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.