ಕಾರವಾರ: ಸಿದ್ದಾಪುರದ ಡಾ.ಶ್ರೀಹರಿ ಚಂದ್ರಘಾಟ್ಗಿ ಜಪಾನ್ನ ಕಾರ್ಪೊರೇಟ್ ವಲಯದ ಅತ್ಯುನ್ನತ ಗೌರವ ‘ಕರೇಜಿಯಸ್ ಎಕ್ಸಿಕ್ಯೂಟಿವ್’ಗೆ ಭಾಜನರಾಗಿದ್ದಾರೆ. ಟೋಕಿಯೊವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಲವು ಗುರುವಾರ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಕೃಷಿ ಸೂಕ್ಷ್ಮಜೀವಿ ತಜ್ಞರಾಗಿರುವ ಅವರು ‘ಇಕೊ ಸೈಕಲ್ ಕಾರ್ಪೊರೇಷನ್’ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಆಧಿಕಾರಿಯಾಗಿದ್ದಾರೆ. ಪ್ರಶಸ್ತಿಯು ₹ 3.27 ಲಕ್ಷ ನಗದು (5 ಲಕ್ಷ ಜಪಾನ್ ಯೆನ್), ಬೆಳ್ಳಿಯ ಫಲಕ, ಟ್ರೋಫಿಯನ್ನು ಒಳಗೊಂಡಿದೆ.
ತಮ್ಮ ಕಂಪನಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವಾಗ ಅತಿ ಹೆಚ್ಚು ಸವಾಲುಗಳನ್ನು ಎದುರಿಸಿದ ಕಾರ್ಪೊರೇಟ್ ಮುಖಂಡರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಈ ವರ್ಷ 148 ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಮತ್ತು ಅಧ್ಯಕ್ಷರನ್ನು ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗಿತ್ತು. ಸಮಾಜದ ವಿವಿಧ ಕ್ಷೇತ್ರಗಳ 12 ಮಂದಿ ತಜ್ಞರು ಆಯ್ಕೆ ಸಮಿತಿಯಲ್ಲಿದ್ದರು.
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಅಧ್ಯಯನ ಮಾಡಿರುವಶ್ರೀಹರಿ, ಜಪಾನ್ನ ಶೀಬಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. 2000ನೇ ಇಸವಿಯಿಂದ ಅವರು ‘ಇಕೊ ಸೈಕಲ್ ಕಾರ್ಪೊರೇಷನ್’ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.