ಬೆಂಗಳೂರು: ದುಬಾರಿ ಬಡ್ಡಿ ದರದ ಆಮಿಷವೊಡ್ಡಿ ಸಾರ್ವಜನಿಕರಿಂದ ಭಾರಿ ಪ್ರಮಾಣದ ಠೇವಣಿ ಸಂಗ್ರಹಿಸಿ ವಂಚಿಸಿರುವ ಆರೋಪ ಎದುರಿಸುತ್ತಿರುವ ಅಜ್ಮೇರಾ ಸಮೂಹದ ₹ 8.41 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಅಜ್ಮೇರಾ ಸಮೂಹದ ವಿರುದ್ಧ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅಜ್ಮೇರಾ ಸಮೂಹ, ತಬ್ರೇಜ್ ಪಾಷಾ, ಅಬ್ದುಲ್ ದಸ್ತಗೀರ್, ತಬ್ರೇಜ್ ಉಲ್ಲಾ ಷರೀಫ್, ಸೈಯದ್ ಮುದಾಸ್ಸೀರ್, ಸೈಯದ್ ಮುತಾಹಿರ್ ಮತ್ತು ಫೈರೋಝ್ ಖಾನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿತ್ತು.
1,148 ಠೇವಣಿದಾರರಿಂದ ₹ 34.66 ಕೋಟಿ ಸಂಗ್ರಹಿಸಿ, ₹ 29.17 ಕೋಟಿ ಹಿಂದಿರುಗಿಸದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಒಟ್ಟು ₹ 256.86 ಕೋಟಿ ಠೇವಣಿ ಸಂಗ್ರಹಿಸಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಠೇವಣಿದಾರರಿಗೆ ₹ 29.17 ಕೋಟಿ ಬಾಕಿ ಇರುವುದು ತನಿಖೆಯಲ್ಲಿ ದೃಢಪಟ್ಟಿತ್ತು.
‘ಅಜ್ಮೇರಾ ಸಮೂಹದ ಒಂದು ಕೃಷಿ ಜಮೀನು, ಒಂದು ವಸತಿ ನಿವೇಶನ, 13 ಬ್ಯಾಂಕ್ ಖಾತೆಗಳು ಮತ್ತು ಒಂದು ಡಿಮ್ಯಾಟ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಒಟ್ಟು ₹ 8.41 ಕೋಟಿ ಮೊತ್ತದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.