ಬೆಂಗಳೂರು: ಹಾಲು ಒಕ್ಕೂಟಗಳು ರೈತರಿಗೆ ಈಗ ನೀಡುತ್ತಿರುವ ದರವನ್ನೇ ಮುಂದುವರಿಸಿಕೊಂಡು ಹೋಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹಾಲು ಒಕ್ಕೂಟಗಳಿಗೆ ಸಲಹೆ ನೀಡಿದ್ದಾರೆ.
14 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತರಿಗೆ ಪ್ರತಿ ಲೀಟರ್ಗೆ ಹೆಚ್ಚಿನ ದರವನ್ನೇ ನೀಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಮಟ್ಟವೂ ಏರಿಕೆಯಾಗುತ್ತದೆ ಎಂದು ಅವರು ಹೇಳಿದರು.
ಕೊರೊನಾ ಸೋಂಕಿನಿಂದಾಗಿ ಹಾಲು ಉತ್ಪಾದನೆಗೆ ಯಾವುದೇ ತೊಂದರೆ ಆಗಿಲ್ಲ, ನಷ್ಟವೂ ಆಗಿಲ್ಲ. ಎಲ್ಲ ಹಾಲು ಒಕ್ಕೂಟಗಳ ಮೂಲಕ ಜನ ಜಾಗೃತಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಜಾರಕಿಹೊಳಿ ತಿಳಿಸಿದರು.
ಕೆಎಂಎಫ್ ಉತ್ಪನ್ನಗಳ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದ್ದು, ಇದಕ್ಕಾಗಿ ಎಲ್ಲ ಒಕ್ಕೂಟಗಳು ಶಕ್ತಿ ಮೀರಿ ಶ್ರಮಿಸಬೇಕು. ಹಾಲು ಶೇಖರಣೆ, ಮಾರಾಟವನ್ನು ಅಭಿವೃದ್ಧಿಪಡಿಸುವ ಸಂಬಂಧ ಅಗತ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಅಧಿಕಾರಿಗಳು ಹಾಲು ಉತ್ಪಾದಕರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದೂ ಅವರು ತಿಳಿಸಿದರು.