ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಮುನ್ನವೇ ಆದೇಶ: ₹500 ಕೋಟಿ ಮೌಲ್ಯದ ಭೂಮಿ ಖಾಸಗಿ ಪಾಲು!

ಸರ್ಕಾರಿ ವಶದ ಭೂಮಿ ಕೈಬಿಟ್ಟ ’ಭೂ ನ್ಯಾಯ‘ಮಂಡಳಿ
Published 14 ಜೂನ್ 2023, 20:17 IST
Last Updated 14 ಜೂನ್ 2023, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಖರಾಬು’ ಎಂದು ಸರ್ಕಾರಿ ದಾಖಲೆಗಳಲ್ಲಿ ಉಲ್ಲೇಖ ಹಾಗೂ ಹಲವಾರು ಆದೇಶಗಳಿದ್ದರೂ ಪಂತರಪಾಳ್ಯ ಬಳಿಯ ಅಂದಾಜು ₹500 ಕೋಟಿ ಮೌಲ್ಯದ ಜಮೀನನ್ನು ಭೂ ನ್ಯಾಯಮಂಡಳಿಯು ಖಾಸಗಿಯವರ ಸ್ವತ್ತು ಎಂದು ಆದೇಶ ಹೊರಡಿಸಿದೆ.

ಮೈಸೂರು ರಸ್ತೆಯ ಪಂತರಪಾಳ್ಯ ಸಮೀಪವಿರುವ 24 ಎಕರೆ 37 ಗುಂಟೆ ಜಮೀನನ್ನು ಈ ಹಿಂದೆ ಹಲವಾರು ಬಾರಿ ಸರ್ಕಾರದ ಸ್ವತ್ತೆಂದು ತೀರ್ಮಾನಿಸಲಾಗಿತ್ತು. ಅಲ್ಲದೇ, 2016ರಲ್ಲೇ ಒತ್ತುವರಿ ತೆರವು ಮಾಡಿ, ಸರ್ಕಾರದ ಸ್ವತ್ತು ಎಂದು ಫಲಕ ಹಾಕಲಾಗಿತ್ತು. ವಿಧಾನಸಭೆ ಚುನಾವಣೆಗೆ ಮುನ್ನ ಅಂದರೆ, ಫೆ.27ರಂದು ಭೂ ನ್ಯಾಯಮಂಡಳಿ ವ್ಯತಿರಿಕ್ತ ಆದೇಶ ಹೊರಡಿಸಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಭೂ ನ್ಯಾಯಮಂಡಳಿ ಅಧ್ಯಕ್ಷರಾಗಿದ್ದ ಉಪವಿಭಾಗಾಧಿಕಾರಿ ಈ ಆದೇಶ ಹೊರಡಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಆದರೆ, ಹೊಸ ಸರ್ಕಾರ ಬಂದ ಮೇಲೆ ನಾಮನಿರ್ದೇಶಿತ ಸದಸ್ಯರಿದ್ದ ಭೂ ನ್ಯಾಯಮಂಡಳಿ ಬರ್ಕಾಸ್ತ್ ಆಗಿದೆ. 

‘ಜಮೀನು ಕಂದಾಯ ದಾಖಲೆ ಪ್ರಕಾರ ಖರಾಬು ಎಂಬುದಾಗಿ ವರ್ಗೀಕರಣ ಆಗಿರುವುದರಿಂದ ಮಂಜೂರು ಮಾಡಲು ಅವಕಾಶ ಇಲ್ಲ’ ಎಂದು ಭೂ ನ್ಯಾಯಮಂಡಳಿ ಅಧ್ಯಕ್ಷ ಅಭಿಪ್ರಾಯ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶಿತರಾಗಿದ್ದ ನಾಲ್ಕು ಸದಸ್ಯರು ವ್ಯತಿರಿಕ್ತ ಅಭಿಪ್ರಾಯ ನೀಡಿದ್ದರು. ಬಹುಮತದ ಆಧಾರದಲ್ಲಿ ಖಾಸಗಿಯವರಿಗೆ ಈ ಜಮೀನು ನೀಡಲು ತೀರ್ಮಾನಿಸಲಾಗಿದೆ. 

ಕೆಂಗೇರಿ ಹೋಬಳಿ ಪಂತರಪಾಳ್ಯ ಗ್ರಾಮದ ಸರ್ವೆ ನಂ.47ರಲ್ಲಿ 24 ಎಕರೆ 37 ಗುಂಟೆ ವಿಸ್ತೀರ್ಣದ ಖರಾಬು ಭೂಮಿ ಒತ್ತುವರಿ ಬಗ್ಗೆ ದಕ್ಷಿಣ ತಾಲ್ಲೂಕು ಭೂ ನ್ಯಾಯಮಂಡಳಿ 2016 ವಿಚಾರಣೆ ನಡೆಸಿತ್ತು. ಭೂ ಕಂದಾಯ ನಿಯಮಾವಳಿ 1966ರ ಪ್ರಕಾರ ಬಿ ವರ್ಗದ ಖರಾಬು ಜಮೀನಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಹೊಂದಿದ್ದು ಎಲ್ಲ ಹಕ್ಕುಗಳು ಸರ್ಕಾರಕ್ಕೆ ಒಳಪಟ್ಟಿರುತ್ತವೆ. 1959ರಲ್ಲಿ ಕೂಡ ಸರ್ಕಾರಿ ಖರಾಬು– ಕಲ್ಲುಗುಟ್ಟೆ ಎಂದು ಸರ್ವೆ ದಾಖಲೆಯಲ್ಲಿ ನಮೂದಾಗಿದೆ. ಮರು ಸರ್ವೆ ಕೂಡ ಆಗಿದೆ. ಸಾಗುವಳಿ ಮಾಡುತ್ತಿದ್ದು, ಭೂಮಿ ತಮ್ಮದೆಂದು ಹೇಳುವವರು ಈ ದಾಖಲೆಯನ್ನು ಪ್ರಶ್ನಿಸಿಲ್ಲ. 

‘ಈ ಪ್ರದೇಶವು ಕಲ್ಲುಗುಟ್ಟೆಗಳಿಂದ ಕೂಡಿದ್ದ ಖರಾಬು ಪ್ರದೇಶ ಎಂದು ಸಮಿತಿಯ ಸ್ಥಳ ಪರಿಶೀಲನೆಯಿಂದ ದೃಢಪಟ್ಟಿದೆ. ಈ ಜಮೀನು ವ್ಯವಸಾಯಕ್ಕೆ ಯೋಗ್ಯವಾದ ಭೂಮಿ ಅಲ್ಲ. ಪ್ರತಿವಾದಿಗಳಿಗೆ ಜಮೀನಿನ ಮೇಲೆ ಯಾವುದೇ ರೀತಿಯ ಸ್ವಾಧೀನದ ಹಕ್ಕು ಇಲ್ಲ. ಆದ್ದರಿಂದ ಸರ್ಕಾರ ಜಮೀನನ್ನು ವಶಕ್ಕೆ ಪಡೆದುಕೊಳ್ಳಬೇಕು’ ಎಂದು 2016ರ ಜೂನ್‌ 29ರಂದು ಭೂ ನ್ಯಾಯಮಂಡಳಿ ಅಂದಿನ ತಹಶೀಲ್ದಾರ್‌ಗೆ ಆದೇಶಿಸಿತ್ತು. ಎನ್. ನಾಗರಾಜ ಅಂದು ಭೂ ನ್ಯಾಯಮಂಡಳಿಯ ಅಧ್ಯಕ್ಷರಾಗಿದ್ದರು. ಕೆ.ಎಂ. ಗೋಪಾಲಕೃಷ್ಣ, ವಿಜಯಕುಮಾರ್‌, ಸಿ. ನರೇಂದ್ರಬಾಬು, ಉಮಾದೇವಿ ಸದಸ್ಯರಾಗಿದ್ದರು. 57 ವರ್ಷಗಳ ಕಾನೂನು ಹೋರಾಟದ ನಂತರ, ಈ ಆದೇಶದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಿ, ಸರ್ಕಾರದ ವಶಕ್ಕೆ ಪಡೆಯಲಾಗಿತ್ತು.

ನಂತರ, ಪ್ರತಿವಾದಿಗಳು ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು. 2019ರ ಸೆ.12ರಂದು ನ್ಯಾಯಾಲಯದ ಆದೇಶದಂತೆ ಭೂ ನ್ಯಾಯಮಂಡಳಿ ಮರುವಿಚಾರಣೆ ಆರಂಭಿಸಿತ್ತು. ಈ ಜಮೀನಿನ ಮಧ್ಯೆ ಬಿಬಿಎಂಪಿ 3 ಎಕರೆ ಪ್ರದೇಶದಲ್ಲಿ ರಸ್ತೆ ಮಾಡಿದ್ದು, 2 ಎಕರೆ 8 ಗುಂಟೆ ಪ್ರದೇಶದಲ್ಲಿ ಕಟ್ಟಡ ತ್ಯಾಜ್ಯವಿದೆ. 1 ಎಕರೆ 20 ಗುಂಟೆ ಕಲ್ಲುಬಂಡೆ ಇದ್ದು, ಉಳಿದ ಜಾಗ ಕೃಷಿ ಮತ್ತು ಹೈನುಗಾರಿಕೆ ನಡೆಸಲಾಗುತ್ತಿದೆ ಎಂಬುದು ಸ್ಥಳ ಪರಿಶೀಲನೆಯಿಂದ ಕಂಡುಬಂದಿದೆ. ಹೀಗಾಗಿ, ಬಿಬಿಎಂಪಿ ರಸ್ತೆ ಮತ್ತು ಬಂಡೆ ಪ್ರದೇಶವನ್ನು ಹೊರತುಪಡಿಸಿ ಉಳಿದ ಜಮೀನನ್ನು ಕೃಷಿ ಮಾಡುತ್ತಿದ್ದು, ಅದು ಕೃಷಿಗೆ ಯೋಗ್ಯ ಭೂಮಿ ಎಂದು ಭೂ ನ್ಯಾಯಮಂಡಳಿಯ ಸದಸ್ಯರಾದ ಎಂ. ನಾಗರಾಜ, ಉಮೇಶ, ಸಿ. ನರಸಿಂಹಮೂರ್ತಿ, ವಿ. ಸೋಮಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

ಉಪವಿಭಾಗಾಧಿಕಾರಿಯೂ ಆಗಿರುವ ಭೂ ನ್ಯಾಯಮಂಡಳಿಯ ಅಧ್ಯಕ್ಷರಾದ ಎ.ಎನ್‌. ರಘುನಂದನ್‌ ಇದಕ್ಕೆ ವ್ಯತಿರಿಕ್ತವಾಗಿ, ‘ಕಂದಾಯ ದಾಖಲೆಗಳ ಪ್ರಕಾರ ಖರಾಬು ಎಂಬುದಾಗಿ ವರ್ಗೀಕರಣ ಆಗಿರುವುದರಿಂದ ಮಂಜೂರು ಮಾಡಲು ಅವಕಾಶ ಇಲ್ಲ’ ಎಂದು ಅಭಿಪ್ರಾಯ ನೀಡಿದ್ದಾರೆ. 

ಇಷ್ಟಾದರೂ, 2023ರ ಫೆ.27ರಂದು ಭೂ ನ್ಯಾಯಮಂಡಳಿಯು ನಾಲ್ಕು ಸದಸ್ಯರ ಬಹುಮತದೊಂದಿಗೆ, ಜಮೀನನ್ನು ‘ಕೃಷಿ ನಡೆಸುತ್ತಿದ್ದ ಅರ್ಜಿದಾರರಿಗೆ’ ಅದಿಭೋಗತ್ವವನ್ನು ಮಂಜೂರು ಮಾಡಲು ತೀರ್ಮಾನಿಸಿದೆ.

ಪಂತರಪಾಳ್ಯ ಸರ್ವೆ ನಂ.47ರಲ್ಲಿರುವ ಬಂಡೆ ಭೂಮಿ
ಪಂತರಪಾಳ್ಯ ಸರ್ವೆ ನಂ.47ರಲ್ಲಿರುವ ಬಂಡೆ ಭೂಮಿ

ಉನ್ನತ ತನಿಖೆಗೆ ಒತ್ತಾಯ

‘ನೂರಾರು ಕೋಟಿ ಬೆಲೆಬಾಳುವ ಈ ಭೂಮಿಯನ್ನು ಜಿಲ್ಲಾಡಳಿತ 2016ರಲ್ಲಿ ತನ್ನ ವಶಕ್ಕೆ ಪಡೆದುಕೊಂಡಿತ್ತು. ಖಾಸಗಿ ವ್ಯಕ್ತಿ ಹೈಕೋರ್ಟ್‌ಗೆ ಹೋಗಿದ್ದರು. ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿ ಭೂ ನ್ಯಾಯಮಂಡಳಿ ವಿಚಾರಣೆಗೆ ಸೂಚಿಸಿತ್ತು. ಈ ಸಂದರ್ಭದಲ್ಲೂ ಖಾಸಗಿ ವ್ಯಕ್ತಿ ಶೆಡ್‌ಗಳನ್ನು ಹಾಕಿಕೊಂಡು ಹಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್‌ನಲ್ಲಿ ಚರ್ಚೆಯಾಗಿತ್ತು. ಕಂದಾಯ ಇಲಾಖೆಯ ಅಂದಿನ ಸಚಿವ ಕಾಗೋಡು ತಿಮ್ಮಪ್ಪ ಸರ್ಕಾರಿ ಖರಾಬು ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತದೆ’ ಎಂದು ಭರವಸೆ ನೀಡಿದ್ದರು. ಆದರೆ ನಂತರ ರಾಜಕೀಯ ವ್ಯಕ್ತಿಗಳ ಹುನ್ನಾರದಿಂದ ಜಮೀನನ್ನು ಖಾಸಗಿಯವರಿಗೆ ನೀಡಲು ಆದೇಶಿಸಿರುವುದು ಕಾನೂನಿನ ಉಲ್ಲಂಘನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಪಿ.ಆರ್‌. ರಮೇಶ್‌ ಆಗ್ರಹಿಸಿದರು.

ಪ್ರಕರಣದ ಹಿನ್ನೆಲೆ

* ‘ಖಾಸಗಿ ವ್ಯಕ್ತಿಯೊಬ್ಬರು 40 ವರ್ಷಗಳಿಂದ ಸರ್ಕಾರಿ ಖರಾಬು ಜಮೀನನ್ನು ವಾಣಿಜ್ಯ ಚಟುವಟಿಕೆಗೆ ದುರ್ಬಳಕೆ ಮಾಡುತ್ತಿದ್ದಾರೆ’ ಎಂದು ವಕೀಲ ಕೆ.ದಿವಾಕರ್‌ ಹಾಗೂ ಸ್ಥಳೀಯ ನಿವಾಸಿ ರಾಮಣ್ಣ ಅವರಿಂದ ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ದೂರು.

* ಚಿಕ್ಕಹನುಮಯ್ಯ ಎಂಬವರು ಪಂತರಪಾಳ್ಯ ಗ್ರಾಮಕ್ಕೆ ಜೋಡಿದಾರರು ಆಗಿದ್ದರು. ಅವರಿಗೆ 100 ಎಕರೆ ಜಾಗ ಇತ್ತು. ಗ್ರಾಮವನ್ನು ಇನಾಂ ಗ್ರಾಮ ಎಂದು 1959ರಲ್ಲಿ ಘೋಷಿಸಲಾಯಿತು. ಆಗ ಜೋಡಿದಾರರೆಲ್ಲ ಜಾಗ ಕಳೆದುಕೊಂಡರು.

* ಚಿಕ್ಕಹನುಮಯ್ಯ ಅವರು ಅರ್ಜಿ ಸಲ್ಲಿಸಿ ಜಾಗ ಪಡೆದರು. ಅದರ ಜತೆಗೆ 24 ಎಕರೆ 37 ಗುಂಟೆ ಜಾಗವನ್ನೂ ವಿಶೇಷ ಜಿಲ್ಲಾಧಿಕಾರಿ ಮಂಜೂರು ಮಾಡಿದರು.

* ಇದನ್ನು ಪ್ರಶ್ನಿಸಿ ಸಾರ್ವಜನಿಕರು ಮೈಸೂರು ಕಂದಾಯ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.

* ವಿಶೇಷ ಜಿಲ್ಲಾಧಿಕಾರಿ ಅವರಿಗೆ ಮಂಜೂರು ಮಾಡುವ ಅಧಿಕಾರವೇ ಇಲ್ಲ ಎಂದು ಪ್ರಾಧಿಕಾರ ಆದೇಶ ನೀಡಿತ್ತು.

* ಆದೇಶದಿಂದ ಅನ್ಯಾಯವಾಗಿದೆ ಎಂದು ಚಿಕ್ಕಹನುಮಯ್ಯ ಹೈಕೋರ್ಟ್‌ ಮೊರೆ ಹೋಗಿದ್ದರು.

* ಇದು ಹಿಡುವಳಿ ಜಾಗವೇ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಇದು ಖರಾಬು ಭೂಮಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ವರದಿ ನೀಡಿದ್ದರು.

* ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ‘ಈ ಜಾಗದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದೆವು’ ಎಂದು ವಾದಿಸಿದ್ದರು. ಇದು ಕೃಷಿ ಭೂಮಿಯೇ ಎಂದು ಪರಿಶೀಲಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.

* ಬೆಂಗಳೂರು ದಕ್ಷಿಣ ಭೂ ನ್ಯಾಯ ಮಂಡಳಿಯು 2016ರಲ್ಲಿ ಒತ್ತುವರಿ ತೆರವಿಗೆ ಆದೇಶ 

* ನಗರ ಜಿಲ್ಲಾಧಿಕಾರಿಯಾಗಿದ್ದ ವಿ. ಶಂಕರ್‌ ನೇತೃತ್ವದಲ್ಲಿ 2016ರ ಜುಲೈ 2ರಂದು ಕಾರ್ಯಾಚರಣೆ ನಡೆಸಿದ ಅಂದಿನ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜ್‌ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT