ಮೈಸೂರು: ‘ಅಡಗೂರು ಎಚ್.ವಿಶ್ವನಾಥ್ ನಮ್ಮ ಗುರುಗಳು. ಯಾವ ಕಾರಣಕ್ಕೂ ಅವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ ಮಂಗಳವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಗುಂಪಿಗೆ ವಿಶ್ವನಾಥ್ ಗುರುಗಳು. ಮುಂಬೈನಲ್ಲಿದ್ದಾಗ ನಮಗೆಲ್ಲಾ ಸದನದ ನಡಾವಳಿಗಳ ಬಗ್ಗೆ ಹೇಳುತ್ತಿದ್ದರು. ಖಾತೆಗೆ ಪಟ್ಟು ಹಿಡಿಯುವಷ್ಟು ದೊಡ್ಡವ ನಾನಲ್ಲ. ಯಡಿಯೂರಪ್ಪ ಎಲ್ಲ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಿದ್ದರಾಮಯ್ಯ ನಮ್ಮ ಆಪ್ತರು ಅನ್ನೋದ್ರಲ್ಲಿ ಅನುಮಾನವೇ ಇಲ್ಲ’ ಎಂದರು.
‘ನಾವೆಲ್ಲಾ ಒಟ್ಟಾಗಿದ್ದೇವೆ. ಗೆದ್ದವರು ಸಭೆ ಸೇರಿ ಸೋತವರ ಭವಿಷ್ಯದಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಯಡಿಯೂರಪ್ಪ ಮಾತು ತಪ್ಪಲ್ಲ: ‘ಯಡಿಯೂರಪ್ಪ ಕೊಟ್ಟ ಮಾತು ತಪ್ಪುವುದಿಲ್ಲ. ಸೋಲಿಗೆ ಜನರನ್ನು ದೂರುವುದಿಲ್ಲ. ಶುದ್ಧ ರಾಜಕಾರಣಕ್ಕಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ. ಸದೃಢ ಸರ್ಕಾರ ತಂದಿರುವ ಖುಷಿ ನನಗಿದೆ’ ಎಂದು ಹುಣಸೂರು ಉಪಚುನಾವಣೆಯಲ್ಲಿ ಪರಾಭವಗೊಂಡ ಬಿಜೆಪಿ ಅಭ್ಯರ್ಥಿ ಅಡಗೂರು ಎಚ್.ವಿಶ್ವನಾಥ್ ಅವರು ಹೇಳಿದರು.
‘ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ.ಕುಮಾರ ಸ್ವಾಮಿ ಒಂದಾಗಿ ನನ್ನನ್ನು ಸೋಲಿಸಿದ್ದಾರೆ. ನೀವೇ ನೋಡಿ, ಭಗವಂತ ಎಲ್ಲೋ ಒಂದು ಕಡೆ ತೋರಿಸ್ತಾನೆ’ ಎಂದು ತಿಳಿಸಿದರು.