ಕೊಡಿಗೇನಹಳ್ಳಿ (ಮಧುಗಿರಿ ತಾ): ಮಧುಗಿರಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಶುಕ್ರವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದೆ. ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿದ್ದ ಕುಮುದ್ವತಿ ನದಿ ಮೈದುಂಬಿ ಹರಿಯುತ್ತಿದ್ದಾಳೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಎಮ್ಮೆಗುಡ್ಡದಲ್ಲಿ ನದಿ ಹುಟ್ಟುತ್ತದೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಹಾದು ಮಧುಗಿರಿ ತಾಲ್ಲೂಕಿನ ಶ್ರಾವಂಡನಹಳ್ಳಿ, ತಿಂಗಳೂರು, ಯಾಕಾರ್ಲಾಹಳ್ಳಿ, ಗುಂಡಗಲ್ಲು, ಕಡಗತ್ತೂರು, ಪರ್ತಿಹಳ್ಳಿ, ಕಸಿನಾಯಕನಹಳ್ಳಿ ಮೂಲಕ ಆಂಧ್ರಪ್ರದೇಶದತ್ತ ಕುಮುದ್ವತಿ ಸಾಗುತ್ತದೆ.
ಇತ್ತೀಚೆಗೆ ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದ ಕಾರಣ ಕುಮುದ್ವತಿ ನದಿಗೆ ಜೀವ ಕಳೆ ಬಂದಿತ್ತು. ಶನಿವಾರ ರಾತ್ರಿ ಕೊಡಿಗೇನಹಳ್ಳಿ ಹೋಬಳಿಯ ತಿಂಗಳೂರು ಹಾಗೂ ಕಲಿದೇವಪುರ ಕೆರೆಗಳು ತುಂಬಿವೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಾದ್ಯಂತ ಶನಿವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಕಡೂರು ಪಟ್ಟಣ, ತಂಗಲಿ, ಮಲ್ಲೇಶ್ವರ, ಬಿಳುವಾಲ, ಯಳ್ಳಂಬಳಸೆ, ಮಚ್ಚೇರಿ ಮುಂತಾದೆಡೆ ಉತ್ತಮ ಮಳೆಯಾಯಿತು. ತಾಲ್ಲೂಕಿನ ಜೀವನಾಡಿ ವೇದಾವತಿ ನದಿ ತುಂಬಿ ಹರಿಯುತ್ತಿದೆ. ತಂಗಲಿ ಮತ್ತು ಎಂ.ಕೋಡಿಹಳ್ಳಿ ಕೆರೆಗಳಿಗೆ ನೀರು ಬಂದಿದೆ.